ರಜನಿಕಾಂತ್ ಜತೆ ಕಮಲ್ ರಾಜಕೀಯ ಕಮಾಲ್ ಸಾಧ್ಯತೆ
ಮಧುರೈ, ಡಿಸೆಂಬರ್ 14: ರಜನಿಕಾಂತ್ ಜತೆ ಕಮಲ್ ಹಾಸನ್ ರಾಜಕೀಯ ಕಮಾಲ್ ಮಾಡುವ ಸಾಧ್ಯತೆ ಇದೆ. ರಜನಿಕಾಂತ್ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆಯನ್ನು ಮಕ್ಕಳ್ ನೀದಿಮಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ನಿರಾಕರಿಸಿಲ್ಲ. ಹಾಗಾಗಿ ತಮಿಳುನಾಡಿನಲ್ಲಿ ರಾಜಕೀಯ ಮೈತ್ರಿಯೊಂದರ ಮೂನ್ಸೂಚನೆ ದೊರೆತಂತಾಗಿದೆ.
ರಜನಿಕಾಂತ್ ಜತೆ ಭವಿಷ್ಯದಲ್ಲಿ ಯಾವುದಾದರೂ ಚುನಾವಣಾ ಒಪ್ಪಂದ ಮಾಡಿಕೊಳ್ಳುವಿರಾ ಎನ್ನುವ ಪ್ರಶ್ನೆಗೆ ಕೆಲವು ಮೈತ್ರಿಗಳು ಮುರಿಯುತ್ತವೆ, ಕೆಲವು ಮೈತ್ರಿಗಳು ಒಟ್ಟಾಗುತ್ತವೆ, ಕಮಲ್ ಹಾಸನ್ ಮೈತ್ರಿ ಬಗ್ಗೆ ಹೆಚ್ಚಿನ ವಿಷಯವನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಜನವರಿಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ: ಪಕ್ಷ ಸ್ಥಾಪನೆ ಘೋಷಣೆ
ತಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಮಧುರೈಯನ್ನು ತಮಿಳುನಾಡಿನ ಎರಡನೇ ರಾಜಧಾನಿಯನ್ನಾಗಿ ಮಾಡುತ್ತೇನೆ, ಅಲ್ಲದೆ ಜನರ ಬೆಂಬಲದೊಂದಿಗೆ ಭ್ರಷ್ಟಾಚಾರವನ್ನು ತೊಡೆದುಹಾಕುತ್ತೇನೆ ಎಂದು ಭರವಸೆ ನೀಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಪಕ್ಷವು ಮೊದಲಬಾರಿಗೆ ಚುನಾವಣೆ ಎದುರಿಸಿತ್ತು. ತಮಿಳುನಾಡಿನ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ ಶೇ.3.77ರಷ್ಟು ಮತವನ್ನು ಗಳಿಸಿತ್ತು.
ಪಕ್ಷದ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ತೃತೀಯ ರಂಗವೇನಾದರೂ ರಚನೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಅದು ಯಾವಾಗ ಸಂಭವಿಸುತ್ತದೆ ಎಂದು ಬಹಿರಂಗ ಪಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.
ನಾವು ಕೊವಿಡ್ ನಿಯಮಗಳನ್ನು ಅನುಸರಿಸುತ್ತಲೇ ಜನರನ್ನು ತಲುಪಲು ಸಿದ್ಧರಾಗಿದ್ದೇವೆ ಎಂದರು.