ತಮಿಳುನಾಡಿನಲ್ಲಿ ರಜನಿಕಾಂತ್ ಅಭಿಮಾನಿಗಳು ಯಾವ ಪಕ್ಷ ಸೇರುತ್ತಾರೆ?
ಚೆನ್ನೈ, ಜನವರಿ.18: ತಮಿಳುನಾಡು ರಾಜಕಾರಣದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಅನಾರೋಗ್ಯದ ಕಾರಣಕ್ಕೆ ರಾಜಕಾರಣದಿಂದ ಸೂಪರ್ ಸ್ಟಾರ್ ರಜನಿಕಾಂತ್ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ರಜನಿ ಮಕ್ಕಳ್ ಮಂಡ್ರಮ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬೇರೆ ಪಕ್ಷ ಸೇರ್ಪಡೆಯಾಗುವುದಕ್ಕೆ ಸದಸ್ಯರೆಲ್ಲ ಸರ್ವ ಸ್ವತಂತ್ರರಾಗಿರುತ್ತಾರೆ ಘೋಷಿಸಲಾಗಿದೆ.
ರಜನಿ ಮಕ್ಕಳ್ ಮಂಡ್ರಮ್ ಪಕ್ಷದ ಕೆಲವು ಜಿಲ್ಲಾಧ್ಯಕ್ಷರು ಡಿಎಂಕೆ ಪಕ್ಷವನ್ನು ಸೇರ್ಪಡೆಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. "ಅವರು ಯಾವುದೇ ಪಕ್ಷವನ್ನು ಸೇರಿಕೊಂಡರೂ ಕೂಡಾ ಅವರೆಲ್ಲ ರಜನಿ ಅಭಿಮಾನಿಗಳೇ ಎನ್ನುವುದನ್ನು ಮರೆಯುವಂತಿಲ್ಲ ಎಂದು ಪಕ್ಷ ಹೇಳಿದೆ.
ಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿ
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದುಕೊಂಡಿವೆ. ಬಿಜೆಪಿಗೆ ರಜನಿಕಾಂತ್ ಅವರು ಬೆಂಬಲ ನೀಡುವುದಿಲ್ಲ ಎಂಬ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆ ಅವರ ಪಕ್ಷದ ಬಹುತೇಕ ಕಾರ್ಯಕರ್ತರು ಮತ್ತು ಬೆಂಬಲಿಗರು ಡಿಎಂಕೆ ಜೊತೆಗೆ ಕೈಜೋಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ರಜನಿಕಾಂತ್ ಬೆಂಬಲದ ನಿರೀಕ್ಷೆ
ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯು ಆಡಳಿತ ಪಕ್ಷ ಎಐಎಡಿಎಂಕೆ ಜೊತೆಗೆ ಕೈಜೋಡಿಸಿದೆ. ಅಷ್ಟಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕೇಸರಿ ಪಾಳಯದ ಕೆಲವು ನಾಯಕರಿದ್ದಾರೆ.
ರಾಜಕೀಯದಿಂದ ದೂರ ಸರಿದ ರಜನಿಕಾಂತ್
ಕಳೆದ ತಿಂಗಳು ಹೊಸ ಪಕ್ಷವನ್ನು ಘೋಷಿಸಿದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಇತ್ತೀಚಿಗಷ್ಟೇ 70 ವರ್ಷದ ರಜನಿಕಾಂತ್ ಅವರಲ್ಲಿ ರಕ್ತದೊತ್ತಡ ಸೇರಿದಂತೆ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅಂದೇ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸಿ, ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಿಲ್ಲ ಎಂಬ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು.
ಸೂಪರ್ ಸ್ಟಾರ್ ನೋವಿನಿಂದ ನುಡಿದಿದ್ದೇನು?
"ಈ ಮಾತನ್ನು ಹೇಳುವುದಕ್ಕೆ ನನಗೆ ತುಂಬಾ ನೋವಾಗುತ್ತದೆ. ನಾನು ರಾಜಕೀಯ ಪ್ರವೇಶಿಸದಿರಲು ತೀರ್ಮಾನಿಸಿದ್ದೇನೆ. ನನ್ನ ತೀರ್ಮಾನದಿಂದ ಆಗುತ್ತಿರುವ ನೋವು ಏನೆಂದು ನನಗಷ್ಟೇ ಗೊತ್ತು. ರಾಜಕಾರಣವನ್ನು ಪ್ರವೇಶಿಸದೇ ನಾನು ಜನಸೇವೆ ಮಾಡುವುದಕ್ಕೆ ಬಯಸುತ್ತೇನೆ. ಇದೊಂದು ನಿರ್ಧಾರದಿಂದ ನನ್ನ ಅಭಿಮಾನಿಗಳಿಗೆ ಅತೀವ ನೋವಾಗುತ್ತದೆ ಎಂಬುದು ಅರ್ಥವಾಗುತ್ತದೆ. ಆದರೂ ನನ್ನನ್ನು ಕ್ಷಮಿಸಿ" ಎಂದು ರಜನಿಕಾಂತ್ ಹೇಳಿದ್ದರು.
ಅಭಿಮಾನಿಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಒತ್ತಾಯ
ತಮಿಳುನಾಡು ರಾಜಕಾರಣವನ್ನು ಪ್ರವೇಶಿಸುವ ಮೊದಲೇ ರಾಜಕೀಯಕ್ಕೆ ರಜನಿಕಾಂತ್ ವಿದಾಯ ಹೇಳಿದರು. ಇದೊಂದು ನಿರ್ಧಾರವು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಅರಗಿಸಿಕೊಳ್ಳದ ತುತ್ತಾಯಿತು. ರಾಜ್ಯದಲ್ಲಿ ಅಭಿಮಾನಿಗಳು ರಜನಿಕಾಂತ್ ರಾಜಕೀಯಕ್ಕೆ ಬರಲೇಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಶುರು ಮಾಡಿದ್ದರು. "ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಅನಾರೋಗ್ಯ ಪೀಡಿಸಿದ್ದು ದೇವರು ನನಗೆ ನೀಡಿದ ಎಚ್ಚರಿಕೆಯಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ರಾಜ್ಯದಲ್ಲಿ ಸುತ್ತಾಡಿ ಪಕ್ಷ ಸಂಘಟನೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ನೀವು ಪ್ರತಿಭಟನೆ ಮೂಲಕ ನನ್ನ ರಾಜಕೀಯ ಪ್ರವೇಶಕ್ಕೆ ಒತ್ತಾಯಿಸಬೇಡಿ ಆ ಮೂಲಕ ನನಗೆ ಮತ್ತಷ್ಟು ನೋವು ಕೊಡಬೇಡಿ" ಎಂದು ರಜನಿಕಾಂತ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.