"ತಮಿಳುನಾಡಿನ ಜನರು ದಡ್ಡರಲ್ಲ; ಎಂದಿಗೂ ತಮ್ಮ ಮತವನ್ನು ವ್ಯರ್ಥ ಮಾಡುವುದಿಲ್ಲ"
ಚೆನ್ನೈ, ಏಪ್ರಿಲ್ 1: ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ತಮಿಳುನಾಡು ಸನ್ನದ್ಧವಾಗುತ್ತಿದೆ. ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ ಹಾಗೂ ಡಿಎಂಕೆ -ಕಾಂಗ್ರೆಸ್ ಮೈತ್ರಿಯಲ್ಲಿದ್ದು, ಹಣಾಹಣಿ ಶುರುವಾಗಿದೆ.
ಗುರುವಾರ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿರುವ ಡಿಎಂಕೆ ನಾಯಕ ಸ್ಟಾಲಿನ್, "ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಎದುರಿನ ಹೋರಾಟ ಭ್ರಷ್ಟಾಚಾರದ ವಿರುದ್ಧದ ಹೋರಾಟ. ಎಐಎಡಿಎಂಕೆ ಸೋಲುವುದು ಖಚಿತ ಎಂದು ಹೇಳಿದ್ದಾರೆ. "ಜನರಿಗೆ ಎಐಎಡಿಎಂಕೆ ಆಡಳಿತದ ಬಗ್ಗೆ ಅರಿವಾಗಿದೆ. ಹೀಗಾಗಿ ಈ ಬಾರಿ ಅವರಿಗೆ ಇಲ್ಲಿ ಜಾಗ ಇಲ್ಲ. ಮೊದಲು ನಾನು ಡಿಎಂಕೆ 200 ಸೀಟುಗಳಲ್ಲಿ ಗೆಲ್ಲುತ್ತದೆ ಎನ್ನುತ್ತಿದ್ದೆ. ಆದರೆ ಚುನಾವಣಾ ಸಮಾವೇಶದಲ್ಲಿ ಭಾಗಿಯಾದ ನಂತರ ನನಗೆ ಅರಿವಾಗುತ್ತಿದೆ, ಎಐಎಡಿಎಂಕೆಗೆ ಏನೂ ಸಿಗುವುದಿಲ್ಲ ಎಂದು" ಎಂದು ಹೇಳಿದ್ದಾರೆ. ಮುಂದೆ ಓದಿ...
ಚುನಾವಣಾ ಪೂರ್ವ ಸಮೀಕ್ಷೆಗಳದ್ದು ಸುಳ್ಳು ಪ್ರಚಾರ; ತಮಿಳುನಾಡು ಸಿಎಂ
"ತಮಿಳುನಾಡಿನ ಜನ ಬುದ್ಧಿವಂತರು"
ಚುನಾವಣೆಯನ್ನು ಎರಡು ಗುಂಪುಗಳ ಯುದ್ಧ ಎಂದು ಬಣ್ಣಿಸಿರುವ ಸ್ಟಾಲಿನ್, ದೆಹಲಿಯಿಂದ ನಿಯಂತ್ರಣಗೊಂಡು ತಮಿಳುನಾಡನ್ನು ಆಡಳಿತ ಮಾಡಲು ಬಯಸುವುದು ಒಂದಾದರೆ, ರಾಜ್ಯದ ಜನರ ಹಕ್ಕಿಗಾಗಿ ಸೆಣೆಸುತ್ತಿರುವ ಪಕ್ಷ ಮತ್ತೊಂದು. ಈ ಚುನಾವಣೆ ಇವೆರಡರ ನಡುವಿನ ಯುದ್ಧ ಎಂದು ಹೇಳಿದ್ದಾರೆ. ತಮಿಳುನಾಡಿನ ಜನರು ಬುದ್ಧಿವಂತರು. ಅವರು ತಮ್ಮ ಮತಗಳನ್ನು ಎಂದಿಗೂ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದಾರೆ.
"ಎಐಎಡಿಎಂಕೆಯಿಂದ ಜನ ಸಾಕಾಗಿ ಹೋಗಿದ್ದಾರೆ"
ಹತ್ತು ವರ್ಷಗಳ ಕಾಲ ಎಐಎಡಿಎಂಕೆ ರಾಜ್ಯವನ್ನು ಆಳಿದೆ. ಈ ಅವಧಿಯಲ್ಲಿ ತಮಿಳುನಾಡು ಜನರನ್ನು ಸಂಕಷ್ಟಕ್ಕೆ ದೂಡಿದೆ. ಈ ಸರ್ಕಾರದ ಬಗ್ಗೆ ಜನರಿಗೆ ಸಾಕಾಗಿಹೋಗಿದೆ. ಹೀಗಾಗಿ ಡಿಎಂಕೆಗೆ ಮತ ಹಾಕುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
"ಇಂಥವರ ವಿರುದ್ಧ ತಮಿಳುನಾಡಿನ ಜನ ನಿಲ್ಲುತ್ತಾರೆ"
ಈ ಕಳೆದ ಹತ್ತು ವರ್ಷಗಳಲ್ಲಿ ತಾನೇನು ಮಾಡಿದ್ದೇನೆ ಎಂದು ತೋರಿಸಲು ಎಐಎಡಿಎಂಕೆಗೆ ಏನೂ ಇಲ್ಲ. ಹತ್ತು ವರ್ಷದಿಂದ ಜನರಿಗಾಗಿ ಏನೂ ಮಾಡಿಲ್ಲ. ಆದರೆ ನಮ್ಮ ವಿರುದ್ಧ ಸುಳ್ಳು ಪ್ರಚಾರಗಳನ್ನು ಮಾಡುತ್ತಿದೆ. ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ನಾನು ಸ್ಪಷ್ಟವಾಗಿದ್ದೇನೆ. ಬಿಜೆಪಿ ಎಐಎಡಿಎಂಕೆಯನ್ನೂ ಮಣಿಸಿ ತನ್ನ ಪಾದವನ್ನು ಇಲ್ಲಿ ಊರಲು ನೋಡುತ್ತಿದೆ. ಆದರೆ ಅದು ಕೂಡ ಸಾಧ್ಯವಾಗುವುದಿಲ್ಲ. ತಮಿಳು ಸಮಾಜವನ್ನು ಒಡೆಯಲು ನೋಡಿದವರ ವಿರುದ್ಧ ಜನರು ನಿಲ್ಲುತ್ತಾರೆ ಹಾಗೂ ಅವರ ಗುರುತೇ ಇಲ್ಲದ ಹಾಗೆ ಆಡುತ್ತಾರೆ ಎಂದರು.
"ಎಐಎಡಿಎಂಕೆ ಬಿಜೆಪಿಗೆ ಪ್ರತಿಯೊಂದಕ್ಕೂ ತಲೆ ಬಾಗುತ್ತದೆ"
ಈ ಚುನಾವಣೆಯಲ್ಲಿ ಗೆದ್ದು ನಾನು ಮುಖ್ಯಮಂತ್ರಿಯಾದರೆ, ಕೇಂದ್ರದೊಂದಿಗೆ ಸ್ನೇಹದಿಂದ ಇರತ್ತೇನೆ. ಆದರೆ ನಮ್ಮ ಹಕ್ಕುಗಳಿಗಾಗಿ ದನಿ ಎತ್ತುವುದನ್ನು ಎಂದಿಗೂ ಬಿಡುವುದಿಲ್ಲ. ನಮ್ಮ ಸ್ವಾಭಿಮಾನ, ಹಕ್ಕುಗಳಿಗಾಗಿ ಏನನ್ನೂ ಬಿಟ್ಟುಕೊಡುವುದಿಲ್ಲ. ಎಐಎಡಿಎಂಕೆ ಬಿಜೆಪಿಗೆ ಪ್ರತಿಯೊಂದಕ್ಕೂ ತಲೆ ಬಾಗುತ್ತದೆ. ಆದರೆ ಇದರಿಂದ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.