ವಣ್ಣಿಯಾರ್ ಸಮುದಾಯಕ್ಕೆ ಶೇ 10.5ರಷ್ಟು ಮೀಸಲಾತಿ: ಮಸೂದೆ ಅಂಗೀಕಾರ
ಚೆನ್ನೈ, ಫೆಬ್ರವರಿ 26: ವಣ್ಣಿಯಾರ್ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10.5ರಷ್ಟು ಮೀಸಲಾತಿ ನೀಡುವ ಮಹತ್ವದ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಯಿತು. ಕೇಂದ್ರ ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆ ಘೋಷಣೆ ಮಾಡುವ ಕೆಲವೇ ನಿಮಿಷಗಳ ಮುನ್ನ ಈ ಮಸೂದೆ ಅಂಗೀಕಾರವಾಗಿದೆ.
ಅತಿ ಹಿಂದುಳಿದ ವರ್ಗಗಳು ಹಾಗೂ ಡಿನೋಟಿಫೈಡ್ ಸಮುದಾಯಗಳ ಶೇ 20ರಷ್ಟು ಮೀಸಲಾತಿಯ ಒಳಗೆ ಈ ಮೀಸಲಾತಿ ನೀಡಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಈ ಮಸೂದೆ ಮಂಡಿಸಿದರು. ಅದನ್ನು ಸದನದಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.
ತಮಿಳುನಾಡು ಚುನಾವಣೆ ದಿನಾಂಕ ನಿಗದಿ ಮೊದಲೇ "ಚಿನ್ನ"ದಂತಾ ಘೋಷಣೆ!
ಆದರೆ ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸಿದ್ದರಿಂದ ಸದನದಲ್ಲಿ ವಿರೋಧಪಕ್ಷಗಳ ಸದಸ್ಯರು ಹಾಜರಿರಲಿಲ್ಲ. ಈ ಮಸೂದೆಯು ಡಿನೋಟಿಫೈಡ್ ಸಮುದಾಯಗಳಿಗೆ ಶೇ 7ರಷ್ಟು ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಶೇ 2.5ರಷ್ಟು ಆಂತರಿಕ ಮೀಸಲಾತಿಯನ್ನು ಒದಗಿಸಲಿದೆ.
ಈ ಮಸೂದೆಯು ವಣ್ಣಿಯಾರ್ ಸಮುದಾಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯದಲ್ಲಿನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಸರ್ಕಾರಿ ಸೇವೆಗಳ ಹುದ್ದೆಗಳ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ನೀಡಲಿದೆ.
ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ತರಾತುರಿಯಲ್ಲಿ ಈ ಮಸೂದೆಯನ್ನು ಅಂಗೀಕರಿಸಿಲಾಗಿದೆ. ಜತೆಗೆ ರೈತರು ಮತ್ತು ಬಡವರಿಗೆ ಸಹಕಾರಿ ಬ್ಯಾಂಕ್ಗಳಿಂದ ನೀಡಿದ ಚಿನ್ನದ ಮೇಲಿನ ಸಾಲವನ್ನು ಮನ್ನಾ ಮಾಡುವುದಾಗಿಯೂ ಪಳನಿಸ್ವಾಮಿ ಶುಕ್ರವಾರ ಘೋಷಿಸಿದ್ದರು.
ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಅನ್ವಯವಾಗುವುದರಿಂದ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ. ಈ ಗಡಿಬಿಡಿಯ ನಿರ್ಧಾರಗಳನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪಳನಿಸ್ವಾಮಿ ಅವರನ್ನು 'ಒಂದು ಗಂಟೆ ಸಿಎಂ' ಎಂದು ವ್ಯಂಗ್ಯ ಮಾಡಲಾಗುತ್ತಿದೆ.