ತಮಿಳುನಾಡಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂ ಜೊತೆಗೆ ಪ್ರಧಾನಿ ಚರ್ಚೆ
ನವದೆಹಲಿ, ನವೆಂಬರ್.27: ನಿವಾರ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜೊತೆ ಮಾಹಿತಿ ಪಡೆದುಕೊಂಡರು.
ತಮಿಳುನಾಡಿನಲ್ಲಿ ಅತಿವೃಷ್ಟಿಯಿಂದ ಪ್ರವಾಹದಲ್ಲಿ ಪ್ರಾಣ ಬಿಟ್ಟವರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯು ಸ್ಪಷ್ಟಪಡಿಸಿದೆ.
ದುರ್ಬಲಗೊಂಡ 'ನಿವಾರ್' ಚಂಡಮಾರುತ: ಆದರೂ ರಾಜ್ಯದಲ್ಲಿ ಎರಡು ದಿನ ಮಳೆ
ನಿವಾರ್ ಚಂಡಮಾರುತದಿಂದ ತಮಿಳುನಾಡು ಮತ್ತು ಪುದುಚೇರಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಈ ಹಿನ್ನೆಲೆ ನೆರೆಗೆ ಸಿಲುಕಿದ 2.30 ಲಕ್ಷ ಜನರನ್ನು ಸಂತ್ರಸ್ತರ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ. ಬಂಗಾಳದಲ್ಲಿ ನವೆಂಬರ್.30ರವರೆಗೆ ಚಂಡಮಾರುತ ಪ್ರಭಾವ ಕೊಂಚ ತಗ್ಗಲಿದೆ. ಆದರೆ ಡಿಸೆಂಬರ್.01ರಿಂದ ತಮಿಳುನಾಡು ಮತ್ತು ಪುದುಚೇರಿ ಭಾಗಗಳಲ್ಲಿ ಮತ್ತಷ್ಟು ಮಳೆ ಆಗುವ ಸಾಧ್ಯತೆಗಳು ಹೆಚ್ಚಾಗಿವ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡಿನಲ್ಲಿ ಮಳೆಗೆ ಮೂವರು ಬಲಿ:
ನಿವಾರ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ಮತ್ತು ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆ ಪ್ರಮಾಣವು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಮಳೆ ಹೊಡೆತಕ್ಕೆ ಈವರೆಗೂ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮಳೆಗೆ ಸಾಕಷ್ಟು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.