'ಅದಾನಿಯನ್ನು ತಡೆಯಿರಿ, ಚೆನ್ನೈ ಉಳಿಸಿ': ತಮಿಳಿಗರ ಆಕ್ರೋಶ
ಚೆನ್ನೈ, ಫೆಬ್ರವರಿ 6: ತಮಿಳುನಾಡಿನ ಕಟ್ಟುಪ್ಪಳ್ಳಿ ಬಂದರನ್ನು ವಿಸ್ತರಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಗೌತಮ್ ಅದಾನಿ ಮಾಲೀಕತ್ವದ ಮೆರೈನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ ಪ್ರೈವೇಟ್ ಲಿಮಿಟೆಡ್ ಈ ಪ್ರಾಜೆಕ್ಟ್ನ ಟೆಂಡರ್ ಪಡೆದುಕೊಂಡಿದೆ. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ.
ಸ್ಟಾಪ್ ಅದಾನಿ ಸೇವ್ ಚೆನ್ನೈ ಎಂಬ ಹ್ಯಾಶ್ಟ್ಯಾಗ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಕಟ್ಟುಪ್ಪಳ್ಳಿ ಬಂದರು ವಿಸ್ತರಣೆ ಯೋಜನೆಯಿಂದ ಇಲ್ಲಿನ ಬಂದರನ್ನೇ ಜೀವನದ ಮೂಲ ಆಸರೆಯನ್ನಾಗಿ ಅವಲಂಬಿಸಿರುವ ನೂರಾರು ಮೀನುಗಾರರ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
Fact Check: ಅದಾನಿಗೆ ಸರ್ಕಾರ ರೈಲ್ವೇಸ್ಅನ್ನು ಮಾರಾಟ ಮಾಡಿಲ್ಲ
ಪ್ರಸ್ತುತ ಇರುವ ಬಂದರಿನಲ್ಲಿನ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಸಂಬಂಧ 2018ರ ನವೆಂಬರ್ನಲ್ಲಿ ಎಂಐಡಿಎಲ್ ತನ್ನ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಈಗ ಅನುಮೋದನೆ ದೊರಕಿರುವುದು ಬಂದರು ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಜತೆಗೆ ಪರಿಸರಕ್ಕೆ ಇದು ಮಾರಕ ಎಂಬ ವಿರೋಧ ಕೂಡ ವ್ಯಕ್ತವಾಗಿದೆ. ಮುಂದೆ ಓದಿ.
2,472.85 ಹೆಕ್ಟೇರ್ ವಿಸ್ತರಣೆ
ಪ್ರಸ್ತುತ ಇರುವ ಬಂದರಿನ 133.50 ಹೆಕ್ಟೇರ್ ಪ್ರದೇಶ, ಸರ್ಕಾರದ 761.8 ಹೆಕ್ಟೇರ್ ಭೂಮಿ, 781.4 ಹೆಕ್ಟೇರ್ ಖಾಸಗಿ ಭೂಮಿ ಮತ್ತು 796.15 ಹೆಕ್ಟೇರ್ ಪ್ರಸ್ತಾವಿತ ಸಮುದ್ರ ಭಾಗ ಸುಧಾರಣೆ ಸೇರಿದಂತೆ ಒಟ್ಟು 2,472.85 ಹೆಕ್ಟೇರ್ಗಳಷ್ಟು ಪ್ರದೇಶದ ಬಂದರನ್ನು ಅಭಿವೃದ್ಧಿಪಡಿಸಲಾಗುವುದು.
ವಿಮಾನ ನಿಲ್ದಾಣಗಳ ಬಿಡ್ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪ
ಸಚಿವಾಲಯದ ಸಮಿತಿ ಪರಿಶೀಲನೆ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮೂವರು ಸದಸ್ಯರ ಉಪ ಸಮಿತಿ ಜೂನ್ ಆರಂಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಳಿಕ ಎಂಐಡಿಪಿಎಲ್ಗೆ ಷರತ್ತುಬದ್ಧ ಅನುಮತಿ ನೀಡಬಹುದು ಎಂಬ ಶಿಫಾರಸು ಮಾಡಿತ್ತು. ಜುಲೈನಲ್ಲಿ ನಡೆದ ಪರಿಣತರ ಸಮಿತಿ ಸಭೆಯ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿತ್ತು.
ಪರಿಣಾಮಗಳ ಬಗ್ಗೆ ಉಲ್ಲೇಖವಿಲ್ಲ
ಈ ಪ್ರದೇಶದ ಪರಿಸರ ಸೂಕ್ಷ್ಮತೆಗಳನ್ನು ಸಮಿತಿ ಪರಿಗಣನೆಗೆ ತೆಗೆದುಕೊಂಡಿದ್ದರೂ, ಪರಿಸರ ಪ್ರಭಾವ ಮೌಲ್ಯನಿರ್ಣಯದ ವಿಸ್ತೃತ ಅಧ್ಯಯನ ಮತ್ತು ಪ್ರಮುಖ ಷರತ್ತುಗಳ ಕುರಿತಾದ ಶಿಫಾರಸುಗಳಾಚೆ ಸಮಿತಿಯ ವರದಿಯಲ್ಲಿ ಯೋಜನೆಯ ಪರಿಣಾಮಗಳ ಬಗ್ಗೆ ಯಾವುದೇ ಪ್ರಮುಖ ಕಳವಳಗಳನ್ನು ವ್ಯಕ್ತಪಡಿಸಿಲ್ಲ ಎಂದು ಎನ್ಜಿಒಗಳು ಆರೋಪಿಸಿವೆ.
ಕೇಂದ್ರ ಬಜೆಟ್ 2021: ಏಳು ಬಂದರು ಅಭಿವೃದ್ಧಿಗೆ ಯೋಜನೆ
ಬರಡು ಭೂಮಿ ಬಳಕೆಯ ನೆಪ
2012ರಲ್ಲಿ ಈ ಬಂದರು ಕಾರ್ಯಾಚರಣೆ ಆರಂಭಿಸಿತ್ತು. ಎಲ್ ಆಂಡ್ ಟಿ ಮೂಲದಲ್ಲಿ ಇದರ ಮಾಲೀಕತ್ವ ವಹಿಸಿತ್ತು. 2018ರಲ್ಲಿ ಎಂಐಡಿಪಿಎಲ್ ಖರೀದಿಸಿತ್ತು. ಇಲ್ಲಿ ಕೃಷಿಯೇತರ ಹಾಗೂ ಬಳಕೆಯಾದ ಬರಡು ಭೂಮಿ ಸಾಕಷ್ಟು ಲಭ್ಯವಿದೆ. ಅದನ್ನು ಅಭಿವೃದ್ಧಿಪಡಿಸಿ ಬಂದರು ಚಟುವಟಿಕೆಗೆ ಬಳಸಿಕೊಳ್ಳಬಹುದು ಎಂದು ಎಂಐಡಿಪಿಎಲ್ ತಿಳಿಸಿತ್ತು.
ಸಾವಿರಾರು ಅವಲಂಬಿತರು
ಆದರೆ ಈ ಯೋಜನೆಗೂ ಮುನ್ನ ಸುತ್ತಮುತ್ತಲ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೋಸತಲೈಯರ್ ನದಿ ಮತ್ತು ಕರಾವಳಿ ಗ್ರಾಮಗಳ ಜನರು ತಮ್ಮ ಜೀವನೋಪಾಯಕ್ಕಾಗಿ ಇಲ್ಲಿನ ಭೂಮಿಯನ್ನು ಅವಲಂಬಿಸಿದ್ದಾರೆ. ಈ ಭಾಗದ ಉರ್ನಂಬೇಡು, ಸೆಗೆನಿಮೇಡು ಮತ್ತು ಇತರೆ ಐದು ಗ್ರಾಮಗಳಲ್ಲಿ 6,080 ಜನಸಂಖ್ಯೆಯಿದೆ. ನೆರೆಯ ಕಟ್ಟೂರ್ ಗ್ರಾಮದ 3,400ಕ್ಕೂ ಅಧಿಕ ನಿವಾಸಿಗಳು ಕೋಸತಲೈಯರ್ ನದಿಯಲ್ಲಿನ ಮೀನುಗಾರಿಕೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಕರಾವಳಿ ಭಾಗದ ಕಟ್ಟುಪಳ್ಳಿ ಸೇರಿದಂತೆ ಮತ್ತೆಹತ್ತು ಗ್ರಾಮಗಳ ಮೀನುಗಾರಿಕೆಯ ಗ್ರಾಮಗಳು ಪ್ರಸ್ತಾಪಿತ ಬಂದರು ವಿಸ್ತರಣೆಯಿಂದ ಸಂಕಷ್ಟಕ್ಕೆ ಒಳಗಾಗುವ ಭೀತಿ ಎದುರಾಗಿದೆ.
ಪುಲಿಕಟ್ ವನ್ಯಜೀವಿ ಸಂರಕ್ಷಣಾ ಪ್ರದೇಶ
ಈ ಬಂದರು ಪುಲಿಕಟ್ ವನ್ಯಜೀವಿ ಸಂರಕ್ಷಣಾ ಪ್ರದೇಶದ ಸಮೀಪದಲ್ಲಿದೆ. ಹೀಗಾಗಿ ಬಂದರು ವಿಸ್ತರಣೆಯು ವನ್ಯಜೀವಿಗಳ ಮೇಲೆ ಪರಿಣಾಮ ಬೀರಲಿದೆ. ಕುಟ್ಟಿಪ್ಪಳ್ಳಿ ದ್ವೀಪ ನಾಶವಾಗಲಿದೆ. ಇದರಿಂದ ಮಳೆ ನೀರು ಗ್ರಾಮಗಳಿಗೆ ನುಗ್ಗಿ ಜನಜೀವನ ಅತೀವ್ರ ತೊಂದರೆಗೆ ಒಳಗಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅದಾನಿ ಬಂದರು ವಿಸ್ತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.