ತಮಿಳುನಾಡಿನಲ್ಲಿ ನಾಲ್ವರು ಸಚಿವರಿಗೆ ಅಂಟಿದ ಕೊರೊನಾವೈರಸ್!
ಚೆನ್ನೈ, ಜುಲೈ.17: ತಮಿಳುನಾಡಿನಲ್ಲಿ ನೊವೆಲ್ ಕೊರೊನಾವೈರಸ್ ಹರಡುವಿಕೆ ಪ್ರಮಾಣವು ರಾಜ್ಯದ ಸಾಮಾನ್ಯ ಜನರನ್ನು ಅಷ್ಟೇ ಅಲ್ಲದೇ ಜನಪ್ರತಿನಿಧಿಗಳ ಎದೆಯಲ್ಲೂ ನಡುಕ ಹುಟ್ಟಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೇತೃತ್ವದ ಸರ್ಕಾರದಲ್ಲಿರುವ ನಾಲ್ಕನೇ ಸಚಿವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಕಾರ್ಮಿಕ ಸಚಿವೆ ನಿಲೋಫರ್ ಕಫೀಲ್ ಅವರಿಗೆ ಕೊವಿಡ್-19 ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.
ಮಹಾರಾಷ್ಟ್ರ, ಕೇರಳ, ತಮಿಳುನಾಡು ಕೋವಿಡ್ ಕೇಸುಗಳ ವಿವರ
ತಮಿಳುನಾಡು ಸರ್ಕಾರದ ಕಾರ್ಮಿಕ ಸಚಿವೆ ನಿಲೋಫರ್ ಕಫೀಲ್ ಅವರಿಗೆ ಹೆಚ್ಚುವರಿಯಾಗಿ ನಗರ ಮತ್ತು ಗ್ರಾಮೀಣ ಉದ್ಯೋಗ, ವಕ್ಫ್ ಬೋರ್ಡ್ ಖಾತೆಯನ್ನು ವಹಿಸಲಾಗಿತ್ತು. ಸಚಿವೆಗೆ ಕೊರೊನಾವೈರಸ್ ಸೋಂಕು ದೃಢಪಟ್ಟ ವಿಷಯ ತಿಳಿಯುತ್ತಿದ್ದಂತೆ ಸಿಎಂ ಪಳನಿಸ್ವಾಮಿ, ಕಫೀಲ್ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡು ಸರ್ಕಾರದ ನಾಲ್ವರು ಸಚಿವರಿಗೆ ಕೊವಿಡ್-19:
ಮೊದಲ ಬಾರಿಗೆ ತಮಿಳುನಾಡಿನಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಪಿ.ಅಂಬಾಲಗನ್ ಅವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇಂಧನ ಸಚಿವ ಪಿ ಥಂಗಮಣಿ ಮತ್ತು ಸಹಕಾರಿ ಸಚಿವ ಸೆಲ್ಲೂರು ಕೆ ರಾಜು ಅವರಿಗೆ ಕೊವಿಡ್-19 ಸೋಂಕು ಪತ್ತೆಯಾಗಿತ್ತು.
ಇನ್ನು, ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಈಗಾಗಲೇ ಒಂದೂವರೆ ಲಕ್ಷದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 1,56,369ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1,07,416 ಸೋಂಕಿತರು ಗುಣಮುಖರಾಗಿದ್ದಾರೆ. 46717 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಾಮಾರಿಗೆ ಇದುವರೆಗೂ ರಾಜ್ಯದಲ್ಲಿ 2236ಕ್ಕೆ ಏರಿಕೆಯಾಗಿದೆ.