ಸರ್ಕಾರಿ ಆಸ್ಪತ್ರೆ ಕಥೆ: "ಶವಗಳ ರಾಶಿ ಮಧ್ಯೆ ಕೊವಿಡ್-19 ಸಂತ್ರಸ್ತ ದೇಹಗಳನ್ನು ನೀವೇ ಹುಡುಕಿ"
ಚೆನ್ನೈ, ಜೂನ್ 02: "ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ನಿಮ್ಮವರ ಮೃತದೇಹವಿದೆ. ನೀವೇ ಅದನ್ನು ಗುರುತಿಸಿಕೊಂಡು ತೆಗೆದುಕೊಂಡು ಹೋಗಿ" ಈ ರೀತಿಯಾಗಿ ವೈದ್ಯಕೀಯ ಸಿಬ್ಬಂದಿಯೇ ಹೇಳಿರುವ ಘಟನೆಯೊಂದು ತಮಿಳುನಾಡಿನಲ್ಲಿ ವರದಿಯಾಗಿದೆ.
ರಾಜ್ಯದ ಥೇಣಿ ಕೆ ವಿಲಕ್ಕು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ರಾಶಿ ಹಾಕಲಾಗಿದೆ. ನೀವೇ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ, ಅಲ್ಲಿರುವ ನಿಮ್ಮ ಸಂಬಂಧಿಯ ಮೃತದೇಹವನ್ನು ಗುರುತಿಸಿ ತೆಗೆದುಕೊಂಡು ಹೋಗಿರಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಿರುವುದಾಗಿ ಮೃತ ವ್ಯಕ್ತಿಯ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.
ಭಯ ಬಿಟ್ಟು ಓದಿ: ಸೋಂಕಿತರ ಮೃತದೇಹಗಳಿಂದ ಹರಡುತ್ತದೆಯೇ ಕೊರೊನಾವೈರಸ್!?
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಥೇಣಿ ಮೂಲದ 47 ವರ್ಷದ ವ್ಯಕ್ತಿಯೊಬ್ಬರು ಮೃತದೇಹವನ್ನು ಪಡೆಯಲು ತೆರಳಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರ ಸಿಬ್ಬಂದಿಯು ಮೃತದೇಹವನ್ನು ಗುರುತಿಸಿ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಸಂಬಂಧಿಕರಿಗೆ ಬಿಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಶವಗಳ ನಡುವೆ ಸಂಬಂಧಿಯ ಮೃತದೇಹ ಹುಡುಕುವುದೇ?
ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನೀಲಿ ಪ್ಲಾಸ್ಟಿಕ್ ನಿಂದ ಸುತ್ತಿದ ಮೃತದೇಹಗಳ ರಾಶಿಯನ್ನು ಕಂಡಾಗ ಒಂದು ಕ್ಷಣ ಸಂಬಂಧಿಕರು ಆಘಾತಕ್ಕೊಳಗಾದರು. ನಂತರ ಸಂಬಂಧಿಕರೇ ಮೃತದೇಹವನ್ನು ಹುಡುಕುವ ಸವಾಲು ಎದುರಾಗಿತ್ತು. ಈ ಕುರಿತು ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಥೇಣಿ ಸರ್ಕಾರಿ ಆಸ್ಪತ್ರೆಯ ಡೀನ್ ಬಾಲಾಜಿ ನಾಥನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಲ್ಲಿ ಮೂವರು ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಗುತ್ತಿಗೆ ನೌಕರನ ಅಮಾನತು, ಇಬ್ಬರಿಗೆ ನೋಟಿಸ್
ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆಗೆ ಸಂಬಂಧ ಒಬ್ಬ ಗುತ್ತಿಗೆ ನೌಕರನನ್ನು ಅಮಾನತ್ತುಗೊಳಿಸಲಾಗಿದೆ. ಉಳಿದ ಇಬ್ಬರು ಸರ್ಕಾರಿ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ನಮ್ಮಲ್ಲಿ ಕೊವಿಡ್-19 ಚಿಕಿತ್ಸೆ ಎರಡು ಕೊಠಡಿಗಳಿದ್ದು, ಅವುಗಳು ಚಿಕ್ಕದಾಗಿವೆ. ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹಗಳು ಹಾಗೂ ಮರಣೋತ್ತರ ಪರೀಕ್ಷೆ ಅಗತ್ಯವಿರುವ ಇತರೆ ಕಾರಣಕ್ಕೆ ಸಾವನ್ನಪ್ಪಿದವರ ಮೃತದೇಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿರುತ್ತದೆ. ಈ ಸಾಮಾನ್ಯ ಕೊಠಡಿಯಲ್ಲಿ ಮೂರು ಮೃತದೇಹಗಳನ್ನು ಇರಿಸಬಹುದು, ಆದರೆ ರಾತ್ರೋರಾತ್ರಿ ಈ ಕೊಠಡಿಯಲ್ಲಿ 15 ಮೃತದೇಹಗಳನ್ನು ತಂದು ಇಟ್ಟಿದ್ದಾರೆ" ಎಂದು ಛೇಣಿ ಸರ್ಕಾರಿ ಆಸ್ಪತ್ರೆ ಡೀನ್ ಬಾಲಾಜಿ ನಾಥನ್ ತಿಳಿಸಿದ್ದಾರೆ.
ಕೊರೊನಾವೈರಸ್ ಶಿಷ್ಟಾಚಾರ ಉಲ್ಲಂಘಿಸಿದ ಆಸ್ಪತ್ರೆ ಸಿಬ್ಬಂದಿ
ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯಿಂದಲೇ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ರಾತ್ರೋರಾತ್ರಿ ಶವಗಳ ರಾಶಿ ಹಾಕಲಾಗಿದೆ. ಕೊರೊನಾವೈರಸ್ ಮೃತರ ದೇಹಗಳನ್ನು ಇರಿಸಲು ನಿಗದಿಪಡಿಸಿದ ಕೊಠಡಿ ಚಿಕ್ಕದಾಗಿರುವ ಹಿನ್ನೆಲೆ ಶವಗಳನ್ನು ಈ ರೀತಿ ಜೋಡಿಸಲಾಗಿತ್ತು. ಮುಂದಿನ ಎರಡು ದಿನಗಳಲ್ಲಿ ಶಿಷ್ಟಾಚಾರದ ಪ್ರಕಾರ ಮೃತದೇಹಗಳನ್ನು ಇರಿಸಲು ಅನುಕೂಲಕರವಾದ ಕೊಠಡಿಯ ವ್ಯವಸ್ಥೆ ಮಾಡಲಾಗುವುದು ಎಂದು ಬಾಲಾಜಿ ನಾಥನ್ ಸ್ಪಷ್ಟನೆ ನೀಡಿದ್ದಾರೆ.
ಭದ್ರತಾ ವೈಫಲ್ಯದಿಂದ ಶವಾಗಾರಕ್ಕೆ ಸಂಬಂಧಿಕಗಳ ಪ್ರವೇಶ
"ಕೊರೊನಾವೈರಸ್ ನಿಯಮದ ಪ್ರಕಾರ, ಶವಾಗಾರದ ಒಬ್ಬ ಸಿಬ್ಬಂದಿ ಹಾಗೂ ಮೃತರ ಕಡೆಯ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇರುತ್ತದೆ. ಆದರೆ ಭದ್ರತಾ ವೈಫಲ್ಯದಿಂದಾಗಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಬಂಧಿಕರು ನಿಯಮಗಳನ್ನು ಉಲ್ಲಂಘಿಸಿ ಶವಾಗಾರ ಪ್ರವೇಶಿಸಿದ್ದಾರೆ. ನಮ್ಮ ವೈದ್ಯಕೀಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯು ನಿಯಮ ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಾಲಾಜಿ ನಾಥನ್ ತಿಳಿಸಿದ್ದಾರೆ.