ಆಂಧ್ರಪ್ರದೇಶ ಗಡಿಯಲ್ಲಿ 5 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ ತಮಿಳುನಾಡು
ಚೆನ್ನೈ, ಏಪ್ರಿಲ್ 27: ಕೊರೊನಾ ವೈರಸ್ ಭೀತಿಯಿಂದ ಅಂತರರಾಜ್ಯ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ರಾಜ್ಯಗಳ ನಡುವಿನ ಸಾರಿಗೆ ವ್ಯವಸ್ಥೆಗೆ ತಾತ್ಕಲಿಕವಾಗಿ ನಿರ್ಬಂಧ ಹೇರಿರುವ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರಗಳು, ಗಡಿಭಾಗದಲ್ಲಿ ಚೆಕ್ಪೋಸ್ಟ್ ನಿರ್ಮಿಸಿಕೊಂಡಿವೆ.
ಬ್ಯಾರಿಕೇಡ್ಗಳನ್ನು ಹಾಕಿ, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅಂತರರಾಜ್ಯ ಸಂಚಾರ ವಿಚಾರದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಬಂದ್ ಮಾಡಲು ಮುಂದಾದ ತಮಿಳುನಾಡು ಸರ್ಕಾರ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಐದು ಅಡಿ ಎತ್ತರದ ತಡೆಗೋಡೆ ನಿರ್ಮಿಸಿದೆ.
ಕೊರೊನಾ ಕುರಿತ ಗೊಂದಲವಿದ್ದರೆ ಒಂದೇ ಒಂದು ಕರೆ ಮಾಡಿ ಸಾಕು
ತಮಿಳುನಾಡಿನ ವೇಲೂರು ಜಿಲ್ಲೆ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಗಡಿ ಹಂಚಿಕೊಂಡಿರುವ ಗುಡಿಯತ್ತಂ ಗ್ರಾಮದಲ್ಲಿ ಈ ಗೋಡೆ ಕಟ್ಟಲಾಗಿದ್ದು, ಇದಕ್ಕೆ ಚಿತ್ತೂರು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದುಕೊಂಡಿಲ್ಲ. ಆದರೆ, ಗೋಡೆ ನಿರ್ಮಿಸುವ ಬಗ್ಗೆ ಮಾಹಿತಿ ಮಾತ್ರ ನೀಡಿದ್ದಾರೆ ಎಂದು ಚಿತ್ತೂರು ಜಂಟಿ ಜಿಲ್ಲಾಧಿಕಾರಿ ಮಾರ್ಕಂಡೇಯಲು ತಿಳಿಸಿದ್ದಾರೆ.
'ವೆಲ್ಲೂರು ತಮಿಳುನಾಡಿನ ಪ್ರಮುಖ ಪಟ್ಟಣವಾಗಿದ್ದು, ಚಿತ್ತೂರಿನ ಗಡಿ ಹಂಚಿಕೊಂಡಿರುವ ಜಿಲ್ಲೆಯಾಗಿದೆ. ಲಾಕ್ಡೌನ್ನಿಂದಾಗಿ ಯಾವುದೇ ಅಂತರರಾಜ್ಯ ಸಾರಿಗೆ ಅಥವಾ ಜನರ ಸಂಚಾರವನ್ನು ಅನುಮತಿಸಲಾಗುತ್ತಿಲ್ಲ. ಅಲ್ಲದೆ, ವೆಲ್ಲೂರು ಮತ್ತು ಚಿತ್ತೂರು ನಡುವೆ ಅಂತರರಾಜ್ಯ ಚೆಕ್-ಪೋಸ್ಟ್ ಇದೆ. ಈ ಸನ್ನಿವೇಶದಲ್ಲಿ, ಎರಡು ರಾಜ್ಯಗಳ ನಡುವೆ ಈ ಕಾಂಕ್ರೀಟ್ ಗೋಡೆ ನಿರ್ಮಿಸಿರುವುದು ವಿಚಿತ್ರ ಮತ್ತು ಅನಗತ್ಯವಾಗಿದೆ' ಎಂದು ಮಾರ್ಕಂಡೇಯಲು ಹೇಳಿದ್ದಾರೆ.
'ಲಾಕ್ ಡೌನ್ ನಿರ್ಬಂಧಗಳ ಹೊರತಾಗಿಯೂ, ಅಗತ್ಯ ಸರಕು ಸಾಗಿಸುವ ವಾಹನಗಳಿಗೆ ಮತ್ತು ತುರ್ತು ಪರಿಸ್ಥಿತಿ ವಾಹನಕ್ಕೆ ಅನುಮತಿ ನೀಡಬೇಕಾಗುತ್ತೆ. ಈ ಉದ್ದೇಶದಿಂದಲೇ ಗಡಿ ಚೆಕ್-ಪೋಸ್ಟ್ಗಳು ಜಾರಿಯಲ್ಲಿವೆ. ಗೋಡೆಗಳನ್ನು ನಿರ್ಮಿಸುವ ಮೂಲಕ ಹೆದ್ದಾರಿಯನ್ನು ಶಾಶ್ವತವಾಗಿ ನಿರ್ಬಂಧಿಸಿದರೆ, ಅದು ತುರ್ತು ಸಾರಿಗೆ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ' ಎಂದು ಚಿತ್ತೂರಿನ ಜಂಟಿ ಜಿಲ್ಲಾಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಒಂದು ತಿಂಗಳ ಲಾಕ್ಡೌನ್ಗೆ ಮನವಿ ಮಾಡಿದ ಒಡಿಶಾ
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ವೆಲ್ಲೂರು ಜಿಲ್ಲಾಧಿಕಾರಿ ಎ.ಶಣ್ಮುಗ ''ಚಿತ್ತೂರು ಜಿಲ್ಲೆಯೊಂದಿಗೆ ಹಂಚಿಕೊಳ್ಳುವ ಆರು ಗಡಿಗಳ ಹೆದ್ದಾರಿಯಲ್ಲಿ ಎರಡು ಸ್ಥಳಗಳಲ್ಲಿ ಮಾತ್ರ ಅಧಿಕಾರಿಗಳು ಗೋಡೆಗಳನ್ನು ನಿರ್ಮಿಸಿದ್ದಾರೆ. ಎರಡು ರಾಜ್ಯಗಳ ನಡುವೆ ಇನ್ನೂ ಕೆಲವು ಗ್ರಾಮೀಣ ಮಾರ್ಗಗಳಿವೆ, ಇವುಗಳನ್ನು ಬಂಡೆಗಳಿಂದ ಮುಚ್ಚಲಾಗುವುದು" ಎಂದು ತಿಳಿಸಿದ್ದಾರೆ.
'ಜನರ ಅನಧಿಕೃತ ಸಂಚಾರವನ್ನು ತಡೆಯುವ ಕಾರಣದಿಂದ ಈ ಗೋಡೆ ನಿರ್ಮಿಸಲಾಗಿದೆ. ಸರಕುಗಳ ಸಾಗಣೆ ಮತ್ತು ತುರ್ತು ಸಂದರ್ಭಗಳಲ್ಲಿ ವಾಹನ ಸಂಚಾರ ಮಾಡಲು ಪರ್ಯಾಯ ಮಾರ್ಗಗಳ ಮೂಲಕ ಅನುಮತಿಸಲಾಗಿದೆ' ಎಂದಿದ್ದಾರೆ.