ಜಲ್ಲಿಕಟ್ಟು ಪ್ರತಿಭಟನೆ ಕೇಸ್ಗಳನ್ನು ಹಿಂಪಡೆಯಲಿದೆ ತಮಿಳುನಾಡು ಸರ್ಕಾರ
ಚೆನ್ನೈ, ಫೆಬ್ರುವರಿ 05: ರಾಜ್ಯದಲ್ಲಿ ಜಲ್ಲಿಕಟ್ಟು ಪ್ರತಿಭಟನೆ ವೇಳೆ ದಾಖಲಿಸಲಾಗಿದ್ದ ಪ್ರಕರಣಗಳನ್ನು ಶೀಘ್ರವೇ ಹಿಂಪಡೆಯುವುದಾಗಿ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಶುಕ್ರವಾರ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಅವರು, "ಜಲ್ಲಿಕಟ್ಟು ಪ್ರತಿಭಟನೆ ವೇಳೆ ದಾಖಲಿಸಲಾಗಿದ್ದ ಹಲವು ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ. ಆದರೆ ಪೊಲೀಸರ ವಿರುದ್ಧ ಗಲಭೆ ನಡೆಸಿ ಹಿಂಸಾಚಾರದಲ್ಲಿ ತೊಡಗಿಕೊಂಡ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಕೇಸ್ಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ" ಎಂದು ಆಶ್ವಾಸನೆ ನೀಡಿದರು.
12,110 ಕೋಟಿ ರೂ ಕೃಷಿ ಸಾಲ ಮನ್ನಾ ಘೋಷಿಸಿದ ಸರ್ಕಾರ
"ಜಲ್ಲಿಕಟ್ಟು ಪ್ರತಿಭಟನೆ ಸಂದರ್ಭ ಹಲವು ಅಹಿತಕರ ಘಟನೆಗಳು ನಡೆದವು. ಹಲವು ಜನರ ವಿರುದ್ಧ ಪ್ರಕರಣಗಳು ದಾಖಲಾದವು. ಹಿಂಸಾಚಾರ ನಡೆಸಿದವರ ವಿರುದ್ಧ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲಿದ್ದೇವೆ" ಎಂದು ತಿಳಿಸಿದರು.
ಶತಮಾನಗಳ ಇತಿಹಾಸವಿರುವ ಜಲ್ಲಿಕಟ್ಟು ಕ್ರೀಡೆಯನ್ನು ತಮಿಳುನಾಡಿನಲ್ಲಿ ಜನವರಿ ಎರಡನೇ ವಾರ, ಸಂಕ್ರಾಂತಿ ಸಂದರ್ಭ ನಡೆಸಲಾಗುತ್ತದೆ. ಪ್ರಾಣಿ ದಯಾ ಸಂಘ ಜಲ್ಲಿಕಟ್ಟು ಆಚರಣೆ ಸಂಬಂಧ ಅರ್ಜಿ ಸಲ್ಲಿಸಿದ ನಂತರ 2014ರಲ್ಲಿ ಸುಪ್ರೀಂ ಕೋರ್ಟ್ ಈ ಕ್ರೀಡೆ ಮೇಲೆ ನಿಷೇಧ ಹೇರಿತ್ತು. ಆದರೆ ಜಲ್ಲಿಕಟ್ಟು ನಮ್ಮ ಸಂಸ್ಕೃತಿಯ ಭಾಗ ಎಂದು ತಮಿಳುನಾಡು ಜನರು ಜಲ್ಲಿಕಟ್ಟು ಆಚರಣೆಗೆ ಒತ್ತಾಯಿಸಿ 2017ರಲ್ಲಿ ಪ್ರತಿಭಟನೆ ಕೈಗೊಂಡ ನಂತರ ಈ ನಿಷೇಧವನ್ನು ತೆರವುಗೊಳಿಸಲಾಯಿತು.
ತಮಿಳುನಾಡಿನಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಐಎಡಿಎಂಕೆ ಸರ್ಕಾರ ತಮಿಳುನಾಡಿನ ಜನರಿಗೆ ಹಲವು ಆಶ್ವಾಸನೆಗಳನ್ನು ನೀಡುತ್ತಿದೆ. ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿಯೂ ರಾಜ್ಯದಲ್ಲಿ ಕೊರೊನಾ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು ಎಂಬುದನ್ನು ಪಳನಿಸ್ವಾಮಿ ಮತ್ತೆ ಪುನರುಚ್ಚರಿಸಿದ್ದಾರೆ. ತಮಿಳುನಾಡನ್ನು ಕೊರೊನಾ ಮುಕ್ತ ರಾಜ್ಯವನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜೊತೆಗೆ 12,100 ಕೋಟಿ ರೂ ಮೊತ್ತದ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದು ತಕ್ಷಣವೇ ಜಾರಿಗೆ ಬರುವುದಾಗಿಯೂ ತಿಳಿಸಿದ್ದಾರೆ.