Sankranthi Special: ಪೊಂಗಲ್ ಗಿಫ್ಟ್, ಕ್ರಿಸ್ಮಸ್ ಕೊಡುಗೆ ಕೊಟ್ಟ ಸಿಎಂ ಇಪಿಎಸ್
ಚೆನ್ನೈ, ಡಿ. 21: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಹೆಚ್ಚಳ ಮಾಡಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಇದಕ್ಕೂ ಮುನ್ನ ಜನತೆಗೆ ಪೊಂಗಲ್(ಸಂಕ್ರಾಂತಿ) ಗಿಫ್ಟ್ ಘೋಷಿಸಿದ್ದರು.
ತಮಿಳುನಾಡು ವಿಧಾನಸಭೆ ಚುನಾವಣೆ 2021ಗಾಗಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ ಮರುದಿನವೇ ಇಂಥದ್ದೊಂದು ಘೋಷಣೆ ಬಂದಿದೆ.
ಜೆರುಸಲೇಂ ಪವಿತ್ರ ಯಾತ್ರೆ ಕೈಗೊಳ್ಳುವ ಆರ್ಥಿಕವಾಗಿ ದುರ್ಬಲ ಕೈಸ್ತ ಸಮುದಾಯಕ್ಕೆ ಸರ್ಕಾರದಿಂದ 20,000 ರು ಸಬ್ಸಿಡಿ ಮೊತ್ತ ನೀಡಲಾಗುತ್ತಿದ್ದು, ಇದನ್ನು 37,000 ರು ಗೆ ಏರಿಕೆ ಮಾಡಲಾಗಿದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಪಳನಿಸ್ವಾಮಿ ಅವರು ತಮ್ಮ ಸ್ವಕ್ಷೇತ್ರ ಸೇಲಂನಿಂದಲೇ ವಿಧಾನಸಭಾ ಪ್ರಚಾರ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಪಳನಿಸ್ವಾಮಿ ಅವರು 2.06 ರೇಷನ್ ಕಾರ್ಡುದಾರರಿಗೆ 2,500 ರು ಜೊತೆಗೆ ಅಕ್ಕಿ, ಕಬ್ಬು, ಗೋಡಂಬಿ, ದ್ರಾಕ್ಷಿ ಹಾಗೂ ಸಕ್ಕರೆ ನೀಡುವ ಮೂಲಕ ಪೊಂಗಲ್ ಆಚರಣೆ ಸಂಭ್ರಮದಿಂದ ನಡೆಯಲಿ ಎಂದು ಬಯಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.
ಮೂರನೇ ಬಾರಿಗೆ ಅಧಿಕಾರಕ್ಕೇರಲು ಎಐಎಡಿಎಂಕೆ ಮುಂದಾಗಿದ್ದು, ದಿವಂಗತ ಜೆ ಜಯಲಲಿತಾ ಇಲ್ಲದೆ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದೆ. ಇಪಿಎಸ್ ಕೂಡಾ ಜಯಲಲಿತಾರಂತೆ ಚುನಾವಣಾ ಪ್ರಚಾರ ಶೈಲಿ, ಆಶ್ವಾಸನೆ ಮಂತ್ರ ಜಪಿಸುತ್ತಾ ಕಣಕ್ಕಿಳಿಯುತ್ತಿದ್ದಾರೆ. ಅಲ್ಪಸಂಖ್ಯಾತರು, ಜಾತಿ, ಮತ, ಪಂಥಕ್ಕೆ ಅನುಗುಣವಾಗಿ ಪ್ಯಾಕೇಜ್ ಘೋಷಣೆ ಮುಂದುವರೆದಿದೆ. ಪಳನಿಸ್ವಾಮಿ ಓಲೈಕೆ ಮುಂದುವರೆದಿದೆ. ನಾಗಾರೋ ದರ್ಗಾ ಹಾಗೂ ವೇಲಂಕಾಣಿ ಚರ್ಚ್ ನಲ್ಲಿ ಇಪಿಎಸ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿವಾರ್ ಹಾಗೂ ಬುರೇವಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಕಡಲೂರು, ನಾಗಪಟ್ಟಿಣಂ, ತಿರುವಾರೂರ್ ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮ ಕ್ಷೀಣಿಸಿದೆ.