ಆ ಪತ್ರಕರ್ತೆ ನನ್ನ ಮೊಮ್ಮಗಳಿದ್ದಂತೆ: ತಮಿಳುನಾಡು ರಾಜ್ಯಪಾಲ
ಚೆನ್ನೈ, ಏಪ್ರಿಲ್ 18: ಪತ್ರಕರ್ತೆಯೊಬ್ಬರ ಕೆನ್ನೆ ಸವರುವ ಮೂಲಕ ವಿವಾದದಲ್ಲಿ ಸಿಲುಕಿದ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಕುರಿತು ಎಲ್ಲೆಡೆಯೂ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ.
ಪತ್ರಕರ್ತೆಯ ಕೆನ್ನೆ ಸವರಿದ ರಾಜ್ಯಪಾಲರ ವಿರುದ್ಧ ಸಿಡಿದ ಟ್ವಿಟ್ಟಿಗರು
ಅವರು ನೀಡಿದ ಅಧಿಕೃತ ಪ್ರಕಟಣೆಯಲ್ಲಿ, "ನಾವು ಸುದ್ದಿಗೋಷ್ಠಿಯನ್ನು ಮುಗಿಸಿ ಎದ್ದು ಹೊರಟಾಗ ನೀವೊಂದು ಪ್ರಶ್ನೆ ಕೇಳಿದಿರಿ. ನೀವು ಕೇಳಿದ ಪ್ರಶ್ನೆ ಉತ್ತಮ ಪ್ರಶ್ನೆಯಾಗಿತ್ತು. ಆದ್ದರಿಂದ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ನಾನು ನಿಮ್ಮ ಕೆನ್ನೆ ಸವರಿದೆ. ನಿಮ್ಮನ್ನು ನಾನು ನನ್ನ ಮೊಮ್ಮಗಳಂತೆ ಎಂದು ತಿಳಿದು ಹಾಗೆ ಮಾಡಿದೆ. ಅದರಲ್ಲಿ ಬೇರೆ ಉದ್ದೇಶವಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
"ಈ ಘಟನೆಯಿಂದ ನಿಮಗೆ ನೋವಾಗಿದೆ ಎಂಬುದು ನನಗೆ ನಂತರ ತಿಳಿಯಿತು. ಅದಕ್ಕಾಗಿ ನನಗೆ ಬೇಸರವಿದೆ. ನಾನು ನಿಮ್ಮಲ್ಲಿ ಅದಕ್ಕಾಗಿ ಕ್ಷಮೆ ಕೇಳುತ್ತೇನೆ" ಎಂದು ಅವರು ಪತ್ರ ಮುಖೇನ ಕ್ಷಮೆ ಯಾಚಿಸಿದ್ದಾರೆ.
ಮಧುರೈ ವಿವಿಯ ಪ್ರಾಧ್ಯಾಪಕಿ ನಿರ್ಮಲಾ ದೇವಿ ಎಂಬುವವರು ತಮ್ಮ ವಿದ್ಯಾರ್ಥಿನಿಯರಿಗೆ, 'ಪದವಿಬೇಕೆಂದರೆ ಹಿರಿಯ ಅಧಿಕಾರಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.
ಈ ವಿವಾದದ ನಂತರ ಅವರು, 'ವಿವಿಯ ಕುಲಪತಿಯಾಗಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನನಗೆ ಚೆನ್ನಾಗಿ ಗೊತ್ತು' ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ರಾಜ್ಯಪಾಲರ ಹೆಸರನ್ನೂ ಸಿಲುಕಿಸಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡುವುದಕ್ಕಾಗಿ ನಡೆದ ಪತ್ರಿಕಾ ಗೋಷ್ಠಿಯ ಸಮಯದಲ್ಲಿ ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿದ ಘಟನೆ ನಡೆದಿತ್ತು.
ಘಟನೆಯ ನಂತರ ರಾಜ್ಯಪಾಲರು ಕ್ಷಮೆಯಾಚಿಸಬೇಕು ಎಂದು ತಮಿಳುನಾಡಿನ ಪತ್ರಕರ್ತರ ಸಂಘ ಒತ್ತಾಯಿಸಿತ್ತು.