ತಮಿಳುನಾಡು: ಮೋದಿ ಜನ್ಮದಿನದಂದು ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರ ಗಿಫ್ಟ್!
ಚೆನ್ನೈ, ಸೆಪ್ಟೆಂಬರ್ 16: ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಜನಿಸುವ ಪ್ರತಿ ಮಗುವಿಗೆ ಚಿನ್ನದ ಉಂಗುರವನ್ನು ನೀಡುವುದಾಗಿ ಘೋಷಿಸಿದೆ. ಇದರ ಜೊತೆಗೆ 720 ಕಿಲೋಗ್ರಾಂಗಳಷ್ಟು ಮೀನುಗಳನ್ನು ಸಹ ವಿತರಿಸಲಾಗುತ್ತದೆ.
ಈ ಯೋಜನೆಗಾಗಿ ಪಕ್ಷವು ಆರ್ಎಸ್ಆರ್ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ ಎಂದು ರಾಜ್ಯದ ಸಚಿವ ಎಲ್ ಮುರುಗನ್ ಮಾಹಿತಿ ನೀಡಿದ್ದಾರೆ. ಅವರೇ ಹೇಳುವಂತೆ ಪ್ರತಿ ಉಂಗುರವು 2 ಗ್ರಾಂ ಇರುತ್ತದೆ. ಇದು ಉಚಿತವಾಗಿ ನೀಡುವ ಕಾರ್ಯಕ್ರಮವಲ್ಲ. ಆದರೆ ಪಕ್ಷವು ಶಿಶುಗಳನ್ನು ಸ್ವಾಗತಿಸಲು ಬಯಸುತ್ತದೆ ಎಂದು ಹೇಳಿದರು.
ತಮಿಳುನಾಡು ಸ್ಥಳೀಯ ಘಟಕದ ಪ್ರಕಾರ, ಸೆಪ್ಟೆಂಬರ್ 17ರಂದು ಆಸ್ಪತ್ರೆಯಲ್ಲಿ 10-15 ಮಕ್ಕಳು ಜನಿಸುವ ನಿರೀಕ್ಷೆಯಿದೆ. ಮೀನು ವಿತರಿಸಲು ಎಂ.ಕೆ.ಸ್ಟಾಲಿನ್ ಅವರ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ. ಮೀನಿನ ಸೇವನೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎನ್ನಲಾಗಿದೆ. ಮೋದಿಗೆ ಸೆಪ್ಟೆಂಬರ್ 17ರಂದು 72 ವರ್ಷವಾಗುವುದರಿಂದ 720 ಕೆಜಿ ಮೀನು ವಿತರಿಸಲಾಗುವುದು ಎಂದು ಹಿಂದೂಸ್ತಾನ್ ವರದಿ ಮಾಡಿದೆ.
ಮೋದಿಯವರ ಹುಟ್ಟುಹಬ್ಬಕ್ಕೆ ಬಿಜೆಪಿ ಪಕ್ಷವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೆಹಲಿಯಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ವಿಶೇಷ ಓಟವನ್ನು ಸಹ ಘೋಷಿಸಲಾಗುವುದು. ಅದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
Narendra Modi Birthday : ಮೋದಿ ಜನ್ಮದಿನಕ್ಕೆ ದೆಹಲಿ ರೆಸ್ಟೋರೆಂಟ್ವೊಂದರಲ್ಲಿ 56 ಖಾದ್ಯಗಳ ವಿಶೇಷ ಥಾಲಿ
ಆಗಸ್ಟ್ 30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅರುಣ್ ಸಿಂಗ್ ಅವರು ಕಳುಹಿಸಿರುವ ಮೂರು ಪುಟಗಳ ಪತ್ರದ ಪ್ರಕಾರ, ಹಿಂದಿನ ವರ್ಷಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಂತೆಯೇ ಈ ಸಂದರ್ಭವನ್ನು 'ಸೇವಾ ಪಖ್ವಾಡಾ' ಎಂದು ಗುರುತಿಸಲು ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ. ಇದರ ಅಡಿಯಲ್ಲಿ, ರಕ್ತದಾನ ಮತ್ತು ಇತರ ವೈದ್ಯಕೀಯ ತಪಾಸಣೆ ಶಿಬಿರಗಳಂತ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಪಕ್ಷದ ನಾಯಕತ್ವವು ಯಾವುದೇ ಕೇಕ್ ಕತ್ತರಿಸದಂತೆ ಅಥವಾ ಹವನಗಳನ್ನು ಆಯೋಜಿಸದಂತೆ ಕಟ್ಟುನಿಟ್ಟಾಗಿ ಹೇಳಿದೆ.
56 ಬಗೆಯ ಖಾದ್ಯಗಳಿರುವ ಊಟ
ದೆಹಲಿಯ ರೆಸ್ಟೋರೆಂಟ್ ಮಾಲೀಕರು ಕೂಡ ದಿನವನ್ನು ವಿಶೇಷವಾಗಿಸಲು ವಿಶೇಷವಾದ ಥಾಲಿ ಊಟವನ್ನು ನೀಡಲು ಸಿದ್ಧರಾಗಿದ್ದಾರೆ. ಕನ್ನಾಟ್ ಪ್ಲೇಸ್ನಲ್ಲಿರುವ ಅರ್ಡೋರ್ 2.0 ರೆಸ್ಟೋರೆಂಟ್ 56 ಐಟಂಗಳನ್ನು ಒಳಗೊಂಡಿರುವ ಭಾರಿ ಪ್ರಮಾಣದ ಥಾಲಿಯನ್ನು ನೀಡುತ್ತಿದೆ. ಗ್ರಾಹಕರಿಗೆ ಇಲ್ಲಿ ವೆಜ್ ಮತ್ತು ನಾನ್ ವೆಜ್ ಎರಡರ ಆಯ್ಕೆ ಇರುತ್ತದೆ.
ಮೋದಿ ನಮ್ಮ ದೇಶದ ಹೆಮ್ಮೆ
ಈ ಬಗ್ಗೆ ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲಾರ ಮಾತನಾಡಿ, ನನಗೆ ಪ್ರಧಾನಿ ಮೋದಿಯವರ ಮೇಲೆ ಅಪಾರ ಗೌರವವಿದೆ. ಅವರು ನಮ್ಮ ದೇಶದ ಹೆಮ್ಮೆ. ಅವರ ಜನ್ಮದಿನದಂದು ನಾವು ವಿಶಿಷ್ಟವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ನಾವು ಈ ಥಾಲಿಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಅದಕ್ಕೆ '56 ಇಂಚಿನ ಮೋದಿ ಜೀ' ಎಂಬ ಹೆಸರೂ ಇಟ್ಟಿದ್ದೇವೆ ಎಂದು ಹೇಳಿದರು.
ಭದ್ರತಾ ಕಾರಣದಿಂದ ಮೋದಿ ಬರಲು ಆಗಲ್ಲ
ನಾವು ಜನರಿಗೆ ಈ ಪ್ಲೇಟ್ ಥಾಲಿ ಅನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಅವರು ಇಲ್ಲಿಗೆ ಬಂದು ತಿನ್ನಬೇಕೆಂದು ನಾವು ಬಯಸುತ್ತೇವೆ. ಆದರೆ, ಭದ್ರತಾ ಕಾರಣಗಳಿಂದ ನಾವು ಇದನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದು ಅವರನ್ನು ಪ್ರೀತಿಯಿಂದ ಪ್ರೀತಿಸುವ ಅವರ ಅಭಿಮಾನಿಗಳಿಗಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಮೋದಿ ಕೈಗೊಂಡ ಯೋಜನೆ, ಸುಧಾರಣೆಗಳ ಮಾಹಿತಿ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾಮರ್ಸ್ ಇಂಪ್ಲಿಮೆಂಟೇಶನ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಸಂಗ್ರಹಿಸಿದ ಪುಸ್ತಕವು ಡಾ ಬಿಆರ್ ಅಂಬೇಡ್ಕರ್ ಅವರ ಜೀವನ ಮತ್ತು ಕಾರ್ಯಗಳನ್ನು ಹೇಳುತ್ತದೆ. ಅಲ್ಲದೆ ಸಮಾಜ ಸುಧಾರಕರ ಆದರ್ಶಗಳನ್ನು ಕಾರ್ಯಗತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಯೋಜನೆಗಳು ಮತ್ತು ಸುಧಾರಣೆಗಳನ್ನು ಸಹ ಹೇಳುತ್ತದೆ