ತಮಿಳುನಾಡು ಹೈಡ್ರಾಮ: ಸ್ಟಾಲಿನ್ ಸೇರಿ 2,000 ಜನರ ಮೇಲೆ ಎಫ್ಐಆರ್
ಮರೀನಾ ಬೀಚಿನಲ್ಲಿ ಸತ್ಯಾಗ್ರಹ ಕೂತಿದ್ದ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್, ಡಿಎಂಕೆಯ ಶಾಸಕರು, ಸಂಸದರು ಮತ್ತು 2,000 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚೆನ್ನೈ, ಫೆಬ್ರವರಿ 19: ಮರೀನಾ ಬೀಚಿನಲ್ಲಿ ಸತ್ಯಾಗ್ರಹ ಕೂತಿದ್ದ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್, ಡಿಎಂಕೆಯ ಶಾಸಕರು, ಸಂಸದರು ಮತ್ತು 2,000 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.[ಎಡಪ್ಪಾಡಿ ಪಳನಿಸ್ವಾಮಿ, ಜಯಲಲಿತಾ ಆಪ್ತ ವಲಯಕ್ಕೆ ಲಗ್ಗೆ ಇಟ್ಟಿದ್ದು ಹೀಗೆ!]
ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ತಮ್ಮ ಪಕ್ಷದ ಶಾಸಕರು ಹಾಗೂ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಸ್ಟಾಲಿನ್ ನೇತೃತ್ವದಲ್ಲಿ ಶನಿವಾರ ಮರೀನಾ ಬೀಚ್ನಲ್ಲಿ ಸತ್ಯಾಗ್ರಹ ಕೂರಲಾಗಿತ್ತು. ಆದರೆ ಇದಕ್ಕೆ ಪೂರ್ವಾನುಮತಿ ಪಡೆಯದ ಹಿನ್ನಲೆಯಲ್ಲಿ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಪಳನಿಸ್ವಾಮಿ ಸಿಎಂ ಆಗಿ ತುಂಬ ಕಾಲ ಉಳಿಯಲ್ಲ ಅನ್ನೋಕೆ ಇಲ್ಲಿವೆ 5 ಕಾರಣ]
ಡಿಎಂಕೆ ಶಾಸಕರು ಔಟ್
ಶನಿವಾರ ನೂತನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ಗೌಪ್ಯ ಮತದಾನಕ್ಕೆ ಅವಕಾಶ ನೀಡಬೇಕೆಂದು ಡಿಎಂಕೆ ಆಗ್ರಹಿಸಿತ್ತು. ಈ ಸಂದರ್ಭ ವಿಧಾನಸಭೆಯೊಳಗೆ ಅಲ್ಲೋಲ ಕಲ್ಲೋಲ ಉಂಟಾಗಿ ಶಾಸಕರ ಮಾರಾಮಾರಿಯೇ ನಡೆದಿತ್ತು. ಕೊನೆಗೆ ಸ್ಪೀಕರ್ ಧನಪಾಲ್ ಡಿಎಂಕೆ ಶಾಸಕರನ್ನು ಅಧಿವೇಶನದ ಹಾಲ್ ನಿಂದ ಹೊರಗೆ ಹಾಕಿದ್ದರು. ಈ ಸಂದರ್ಭ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವುದು ಸ್ಟಾಲಿನ್ ಆರೋಪವಾಗಿದೆ. ಹರಿದ ಶರ್ಟ್ ಜತೆ ಅಧಿವೇಶನದಿಂದ ಹೊರ ಬಂದ ಸ್ಟಾಲಿನ್ ಇದು 'ಪ್ರಜಾಪ್ರಭುತ್ವಕ್ಕೆ ಕರಾಳ ದಿನ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮರೀನ್ ಬೀಚಿನಲ್ಲಿ ಸತ್ಯಾಗ್ರಹ
ಈ ಸಂದರ್ಭ ಡಿಎಂಕೆ ಶಾಸಕರು ಹಾಗೂ ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮರೀನಾ ಬೀಚ್ನ ಗಾಂಧಿ ಪ್ರತಿಮೆ ಮುಂದಿ ಸ್ಟಾಲಿನ್ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಸತ್ಯಾಗ್ರಹದಲ್ಲಿ ಎಲ್ಲಾ ಶಾಸಕರು, ಸಂಸದರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
2,000 ಜನರ ಮೇಲೆ ಎಫ್ಐಆರ್
ಆದರೆ ಸತ್ಯಾಗ್ರಹಕ್ಕೆ ಪೂರ್ವಾನುಮತಿ ಪಡೆಯದ ಹಿನ್ನಲೆಯಲ್ಲಿ ಅಕ್ರಮ ಸಭೆ ಮತ್ತು ಸಾರ್ವಜನಿಕ ಆದೇಶ ಉಲ್ಲಂಘನೆ ಆರೋಪದ ಮೇಲೆ ಸ್ಟಾಲಿನ್, ಅವರ ಸಹೋದರಿ ಹಾಗೂ ಸಂಸತ್ ಸದಸ್ಯೆ ಕನಿಮೋಳಿ, 63 ಶಾಸಕರು, 7 ಸಂಸದರು ಮತ್ತು 2,000ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಫೆ. 22 ಉಪವಾಸ ಸತ್ಯಾಗ್ರಹ
ಶಾಸಕರ ಮೇಲಿನ ಹಲ್ಲೆ ಖಂಡಿಸಿ ಡಿಎಂಕೆ ಪಕ್ಷದ ಎಲ್ಲಾ ಜಿಲ್ಲಾ ಕಚೇರಿಗಳಲ್ಲೂ ಫೆಬ್ರವರಿ 22ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಕರೆ ನೀಡಿದೆ. ತಿರುಚ್ಚಿಯಲ್ಲಿ ತಾವು ಉಪವಾಸ ಸತ್ಯಾಗ್ರಹ ಕೂರುವುದಾಗಿ ಸ್ಟಾಲಿನ್ ಹೇಳಿದ್ದಾರೆ.
ರಾಷ್ಟ್ರಪತಿ ಭೇಟಿ
ಮಾತ್ರವಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯನ್ನು ಭೇಟಿಯಾಗುವುದಾಗಿಯೂ ಸ್ಟಾಲಿನ್ ತಿಳಿಸಿದ್ದಾರೆ. ಭೇಟಿ ವೇಳೆ ತಮಿಳುನಾಡು ವಿಧಾನಸಭೆಯ ಪರಿಸ್ಥಿತಿ ವಿವರಿಸುವುದಾಗಿ ಹೇಳಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ರಿಗೆ ಸ್ಟಾಲಿನ್ ಮನವಿಯನ್ನೂ ಸಲ್ಲಿಸಿದ್ದಾರೆ.