ತಮಿಳುನಾಡಲ್ಲಿ "ಕರ್ನಾಟಕದ ಸಿಂಗಂ" ಕೆ.ಅಣ್ಣಾಮಲೈ ಸ್ಪರ್ಧೆಯ ಕ್ಷೇತ್ರ ಯಾವುದು?
ಚೆನ್ನೈ, ಮಾರ್ಚ್.12: ಕರ್ನಾಟಕದ ಸಿಂಗಂ ಅಂತಲೇ ಕರೆಸಿಕೊಳ್ಳುತ್ತಿದ್ದ ಖಡಕ್ ಪೊಲೀಸ್ ಆಫೀಸರ್ ಕೆ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಪ್ರವೇಶಿಸಿದ್ದು, ಎಲ್ಲರಿಗೂ ಗೊತ್ತೇ ಇದೆ. ಅದೇ ಅಣ್ಣಾಮಲೈ ಅವರ ಕುರಿತು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಜನಸೇವೆ ಉದ್ದೇಶದಿಂದ ಸರ್ಕಾರ ಹುದ್ದೆಗೆ ಗುಡ್ ಬೈ ಎಂದ ಅಣ್ಣಾಮಲೈ ತಮಿಳುನಾಡಿನ ಕಡೆಗೆ ಮುಖ ಮಾಡಿದ್ದರು. ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಅಣ್ಣಾಮಲೈ ಅವರಿಗೆ ಪಕ್ಷವು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ನೀಡಿತ್ತು.
ತಮಿಳುನಾಡು ಚುನಾವಣೆ: 173 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಡಿಎಂಕೆ
ತಮಿಳುನಾಡು ರಾಜಕಾರಣದಲ್ಲಿ ಮಿಂಚು ಹರಿಸಲು ಮುಂದಾಗಿರುವ ಅಣ್ಣಾಮಲೈ ಇದೀಗ ವಿಧಾನಸಭಾ ಚುನಾವಣಾ ಕಣದಲ್ಲಿ ಸದ್ದು ಮಾಡುತ್ತಿದ್ದಾರೆ. ಅಣ್ಣಾಮಲೈ ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಾರೆ. ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದ ಹಿಂದಿನ ಉದ್ದೇಶವೇನು. ಅಣ್ಣಾಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರದ ಹಿನ್ನಲೆ ಮತ್ತು ವಾಸ್ತವದ ಸ್ಥಿತಿ ಹೇಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಅರವಾಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧೆ?
ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಎಐಡಿಎಂಕೆ ನಡುವೆ ಚುನಾವಣಾ ಪೂರ್ವ ಮೈತ್ರಿಯಾಗಿದ್ದು, ಬಿಜೆಪಿಗೆ 20 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಈ ಪೈಕಿ ಕರೂರು ಜಿಲ್ಲೆಯ ಅರವಾಕುರಿಚಿ ವಿಧಾನಸಭಾ ಕ್ಷೇತ್ರವು ಬಿಜೆಪಿ ಪಾಲಿಗೆ ಸಿಕ್ಕಿದೆ. 2,13,110 ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ 1,01,902 ಪುರುಷ ಮತ್ತು 1,11,201 ಮಹಿಳಾ ಮತದಾರರಿದ್ದಾರೆ. 45,000ಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕೆ. ಅಣ್ಣಾಮಲೈ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ತಮಿಳುನಾಡಿನ ಅರವಾಕುರಿಚಿ ಡಿಎಂಕೆಯ ಭದ್ರಕೋಟೆ
ಅರವಾಕುರಿಚಿ ವಿಧಾನಸಭಾ ಕ್ಷೇತ್ರವು ದ್ರಾವಿಡ್ ಮುನೇತ್ರ ಕಾಳಗಂ ಪಕ್ಷದ ಭದ್ರಕೋಟೆ ಎನಿಸಿದೆ. ಅಲ್ಪಸಂಖ್ಯಾತರ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿರುವ ಈ ಕ್ಷೇತ್ರದಲ್ಲಿ ಕಳೆದ 53 ವರ್ಷಗಳಿಂದಲೂ ಡಿಎಂಕೆ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ಅರವಾಕುರಿಚಿ ಕ್ಷೇತ್ರದಿಂದ ಬಿಜೆಪಿಯು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶದಿಂದ ಅಣ್ಣಾಮಲೈ ಅವರಿಗೆ ಟಿಕೆಟ್ ನೀಡುವುದು ಪಕ್ಕಾ ಆಗಿದೆ.
ಅರವಾಕುರಿಚಿಯಲ್ಲೇ ಕಣಕ್ಕಿಳಿಯುವ ಬಗ್ಗೆ ಸುಳಿವು
ಡಿಎಂಕೆ ಪಾಲಿನ ಭದ್ರಕೋಟೆ ಆಗಿರುವ ಅರವಾಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. 53 ವರ್ಷಗಳಿಂದ ಗೆಲುವು ಸಾಧಿಸುತ್ತಾ ಬಂದಿರುವ ಡಿಎಂಕೆ ಪಕ್ಷದ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಳೇ ಬೇಕಾಗಿಲ್ಲ. ನಿಮ್ಮ ನಿರ್ಲಕ್ಷ್ಯ ಧೋರಣೆಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಈ ಬಾರಿ ಗೆಲುವು ನಿಮ್ಮದಲ್ಲ, ನಮ್ಮದು ಎನ್ನುವ ಮೂಲಕ ತಾವು ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸ್ವತಃ ಕೆ. ಅಣ್ಣಾಮಲೈ ಅವರು ಸುಳಿವು ನೀಡಿದ್ದರು.
ಹಾಲಿ ಶಾಸಕ ಸೆಂಥಿಲ್ ವೈಫಲ್ಯದ ಬಗ್ಗೆ ಉಲ್ಲೇಖ
ದೇಶದಲ್ಲೇ ತಿರುಪ್ಪೂರ್ ಜವಳಿಯು ಅಗ್ರಸ್ಥಾನದಲ್ಲಿದ್ದು, ಅದನ್ನೂ ಮೀರಿಸಿ ಬೆಳೆಯುವಂತಾ ಅವಕಾಶ ಅರವಾಕುರಿಚಿ ಕ್ಷೇತ್ರಕ್ಕಿತ್ತು. ಆದರೆ ಡಿಎಂಕೆ ಶಾಸಕರು ಕ್ಷೇತ್ರ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಏನೂ ಮಾಡಲಿಲ್ಲ ಎಂದು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದರು.
ಒಂದು ಹಂತದಲ್ಲಿ ತಮಿಳುನಾಡು ಚುನಾವಣೆ
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್.06ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.02ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ರಾಜ್ಯದಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ.