ಅಣ್ಣಾಮಲೈಗೆ ಆಘಾತ: ನಾಮಪತ್ರ ತಡೆ ಹಿಡಿದ ಚುನಾವಣಾ ಆಯೋಗ
ಚೆನ್ನೈ, ಮಾರ್ಚ್ 20: ತಮಿಳುನಾಡಿನ ಅರವಕುರುಚಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಆರಂಭದಲ್ಲಿಯೇ ಆಘಾತ ಎದುರಾಗಿದೆ. ಡಿಎಂಕೆ ಭದ್ರಕೋಟೆ ಎನಿಸಿರುವ ಅರವಕುರಚಿ ಕ್ಷೇತ್ರದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಅಭ್ಯರ್ಥಿಯಾಗಿ ಮಾರ್ಚ್ 18ರಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ಇನ್ನೂ ಅಂಗೀಕಾರವಾಗಿಲ್ಲ. ನಾಮಪತ್ರಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ.
ಬಿಜೆಪಿ ಸೇರಿದಾಗಿನಿಂದ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದ ಅಣ್ಣಾಮಲೈ ಅವರನ್ನು ಅರವಕುರಚಿ ಕ್ಷೇತ್ರದ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಮಾಡುವ ಮುನ್ನವೇ ಅವರು ಉತ್ಸಾಹದಿಂದ ಪ್ರಚಾರ ಕಾರ್ಯಗಳನ್ನು ನಡೆಸಿದ್ದರು. ಆದರೆ, ಅವರು ಅಪರಾಧ ಪ್ರಕರಣ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಚುನಾವಣೆ ಹೊಸ್ತಿಲಿನಲ್ಲಿಯೇ ಸಂಕಷ್ಟ ಎದುರಾಗಿದೆ.
ತಮಿಳುನಾಡಿನ ಅರವಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ನಾಮಪತ್ರ
ಅಣ್ಣಾಮಲೈ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿನ ಅಫಿಡವಿಟ್ನಲ್ಲಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇದೆ ಎಂಬುದನ್ನು ಉಲ್ಲೇಖಿಸಿಲ್ಲ. ಅಣ್ಣಾಮಲೈ ವಿರುದ್ಧ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಪಕ್ಷೇತರ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸ್ಪಷ್ಟೀಕರಣ ಕೇಳಿದೆ.
ನಾಮಪತ್ರಕ್ಕೆ ತಡೆ
ಅಣ್ಣಾಮಲೈ ಅವರು ಹತ್ತಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ ಅವರು ನಾಮಪತ್ರದಲ್ಲಿ ಅದರ ಬಗ್ಗೆ ಮಾಹಿತಿ ನೀಡದೆ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ವಿವರಣೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಜತೆಗೆ ಅವರ ನಾಮಪತ್ರವನ್ನು ತಡೆ ಹಿಡಿದಿದೆ.
ಕೆ. ಅಣ್ಣಾಮಲೈ ಪರವಾಗಿ ಮುನಿರತ್ನ ಭರ್ಜರಿ ಪ್ರಚಾರ
ನಾಮಪತ್ರ ಸಲ್ಲಿಕೆಗೆ ತೇಜಸ್ವಿ ಸೂರ್ಯ ಸಾಥ್
ಅಣ್ಣಾಮಲೈ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ತಮಿಳುನಾಡು ಸಾರಿಗೆ ಸಚಿವ ಎಂಆರ್ ವಿಜಯಭಾಸ್ಕರ್ ಮುಂತಾದವರ ಜತೆ ಸೈಕಲ್ನಲ್ಲಿ ತೆರಳಿ ಗುರುವಾರ ನಾಮಪತ್ರ ಸಲ್ಲಿಸಿದ್ದರು. ಈ ಮೂಲಕ ಐಪಿಎಸ್ ಹುದ್ದೆ ತ್ಯಜಿಸಿದ ಬಳಿಕ ಚುನಾವಣಾ ರಾಜಕಾರಣದತ್ತ ಮೊದಲ ಹೆಜ್ಜೆ ಇರಿಸಿದ್ದರು. ಆದರೆ ಆರಂಭದಲ್ಲಿಯೇ ಕಂಟಕ ಎದುರಾಗಿದೆ.
ಮಾಸ್ಕ್ ಧರಿಸದೆ ತೆರಳಿದ್ದ ಮುಖಂಡರು
ನಾಮಪತ್ರ ಸಲ್ಲಿಸಲು ತೆರಳಿದ್ದ ಈ ಮೂವರೂ ಮಾಸ್ಕ್ ಧರಿಸದ ಕಾರಣ ಪೊಲೀಸರು ಆವರಣದ ಹೊರಭಾಗದಲ್ಲಿಯೇ ಅವರನ್ನು ತಡೆದಿದ್ದರು. ಜೇಬಿನಿಂದ ಮಾಸ್ಕ್ ತೆಗೆದು ಧರಿಸಿದ ಬಳಿಕವೇ ಒಳಗೆ ಬಿಟ್ಟಿದ್ದರು. ಅರವಕುರಚಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಅರೆ ಬೆತ್ತಲಾಗಿ ಬಂದಿದ್ದ ದೇಶೀಯ ತೇನಿಂಧಿಯಾ ನಾಥಿಗಲ್ ಇನೈಪು ವ್ಯವಸಾಯಿಗಳ್ ಸಂಗಮ್ನ ರಾಜ್ಯ ಅಧ್ಯಕ್ಷ ಅಯ್ಯಕನ್ನು ಮತ್ತು ಇತರೆ ಎಂಟು ರೈತರನ್ನು ತಡೆದಿದ್ದ ಪೊಲೀಸರು ಅವರನ್ನು ಬಂಧಿಸಿದ್ದರು.
ಹೊಸ 'ಕುರುಕ್ಷೇತ್ರ'ದತ್ತ ಹೊರಟ ಶಾಸಕ ಮುನಿರತ್ನ: ದೊಡ್ಡ ಜವಾಬ್ದಾರಿ ನೀಡಿದ ಬಿಜೆಪಿ
ಮುನಿರತ್ನ ವ್ಯಾಪಕ ಪ್ರಚಾರ
ಮತಪತ್ರಗಳ ಪರಿಶೀಲನೆ ಶನಿವಾರ ಆರಂಭವಾಗಿದ್ದು, ಇ ಪಳನಿಸ್ವಾಮಿ, ಓ ಪನ್ನೀರ್ ಸೆಲ್ವಂ, ಎಂಕೆ ಸ್ಟಾಲಿನ್, ಖುಷ್ಬೂ ಸುಂದರ್, ಸಿ ವಿ ಷಣ್ಮುಗಂ ಮುಂತಾದವರು ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಮಾರ್ಚ್ 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಅರವಕುರಚಿಯಲ್ಲಿ ಮೊಕ್ಕಾಂ ಹೂಡಿದ್ದು, ಅಣ್ಣಾಮಲೈ ಅವರ ಗೆಲುವಿಗಾಗಿ ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದಾರೆ.