Breaking: ತಮಿಳುನಾಡಲ್ಲಿ ದಲಿತರ ಹತ್ಯೆ; 27 ಮಂದಿಗೆ ಜೀವಾವಧಿ ಶಿಕ್ಷೆ
ಚೆನ್ನೈ, ಆ.05: 2018ರಲ್ಲಿ ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ ನಡೆದ ಮೂವರು ದಲಿತರ ಹತ್ಯೆ ತಮಿಳುನಾಡನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲಾಗಿದ್ದ 27 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ತಮಿಳುನಾಡಿನ ಶಿವಗಂಗಾ ವಿಶೇಷ ನ್ಯಾಯಾಲಯವು ಶುಕ್ರವಾರ ಕಚನಾಥಂನಲ್ಲಿ ಮೂವರು ದಲಿತರನ್ನು ಹತ್ಯೆಗೈದ ಎಲ್ಲಾ 27 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರು
ಮೇ 28, 2018 ರಂದು, ಕಚನಾಥಂ ಗ್ರಾಮದಲ್ಲಿ ದೇವಸ್ಥಾನದ ಉತ್ಸವದ ವಿವಾದದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅರುಮುಗಂ (65), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರನ್ (34) ಅವರನ್ನು ಮತ್ತೊಂದು ಸಮುದಾಯಕ್ಕೆ ಸೇರಿದ ಜನರು ಕೊಲೆ ಮಾಡಿದ್ದರು.
ಈ ಘರ್ಷಣೆಯಲ್ಲಿ ಹಲವಾರು ದಲಿತರಿಗೆ ಗಾಯಗಳಾಗಿತ್ತು. ಗಾಯಗೊಂಡವರಲ್ಲಿ ತನಶೇಖರನ್ (32) ಎಂಬುವವರು ಘಟನೆ ನಡೆದು ಒಂದೂವರೆ ವರ್ಷಗಳ ನಂತರ ನಿಧನರಾದರು.
ಈ ಪ್ರಕರಣದಲ್ಲಿ ಅವರಂಗಾಡು ಗ್ರಾಮದ ಸುಮನ್, ಅರುಣಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಸೇರಿದಂತೆ 33 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ಇಬ್ಬರು ವಿಚಾರಣೆ ವೇಳೆ ಸಾವನ್ನಪ್ಪಿದ್ದಾರೆ.
ಮೂವರು ಬಾಲಕರಾಗಿದ್ದರೇ ಮತ್ತೊಬ್ಬರು ಪರಾರಿಯಾಗಿದ್ದಾರೆ. ಇದರಿಂದ ಉಳಿದ 27 ಮಂದಿಯ ವಿಚಾರಣೆಯನ್ನು ಶಿವಗಂಗಾ ಸಮಗ್ರ ನ್ಯಾಯಾಲಯ ಸಂಕೀರ್ಣದಲ್ಲಿರುವ ದೌರ್ಜನ್ಯ ತಡೆ ನ್ಯಾಯಾಲಯದಲ್ಲಿ ನಡೆಸಲಾಗುತ್ತಿತ್ತು.
ಆಗಸ್ಟ್ 1 ರಂದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳ ವಿಶೇಷ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವು ಪ್ರಕರಣದ 27 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಆಗಸ್ಟ್ 3 ರಂದು ವಿಚಾರಣೆ ನಡೆಸಲಾಯಿತು. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿಯ ಮೇರೆಗೆ 27 ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.