12,110 ಕೋಟಿ ರೂ ಕೃಷಿ ಸಾಲ ಮನ್ನಾ ಘೋಷಿಸಿದ ಸರ್ಕಾರ
ಚೆನ್ನೈ, ಫೆಬ್ರವರಿ 5: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ತಮಿಳುನಾಡಿನ 16 ಲಕ್ಷಕ್ಕೂ ಅಧಿಕ ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡುವುದಾಗಿ ಎಐಎಡಿಎಂಕೆ ಸರ್ಕಾರ ಘೋಷಿಸಿದೆ. ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ ಒಟ್ಟು 12,110 ಕೋಟಿ ರೂ ಮೊತ್ತದ ಕೃಷಿ ಸಾಲಗಳನ್ನು ಮನ್ನಾ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು.
ಕೊರೊನಾ ವೈರಸ್ ಪಿಡುಗು, ಎರಡು ಸತತ ಚಂಡಮಾರುತಗಳು ಹಾಗೂ ಅಕಾಲಿಕ ಮಳೆಯ ಕಾರಣಗಳಿಂದ ರೈತರ ಬದುಕು ಕಠಿಣವಾಗಿದ್ದು, ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಅವರು ಕೃಷಿಯಲ್ಲಿ ಪುನಶ್ಚೇತನ ಕಂಡುಕೊಳ್ಳಲು ಸಹಾಯ ಮಾಡುವುದು ಮುಖ್ಯವಾಗಿದೆ ಎಂದು ಪಳನಿಸ್ವಾಮಿ ಹೇಳಿದರು.
ಆನ್ಲೈನ್ ಜೂಜಿಗೆ ಬಿತ್ತು ಬ್ರೇಕ್; ತಮಿಳುನಾಡಿನಲ್ಲಿ ಕಾಯ್ದೆ ಜಾರಿ
ಈ ಸಾಲಮನ್ನಾ ತಕ್ಷಣದಿಂದಲೇ ಜಾರಿಯಾಗಲಿದ್ದು, ಸರ್ಕಾರದ ಖಜಾನೆಗಾಗಿ ಅದಕ್ಕೆ ಅಗತ್ಯವಾದ ಅನುದಾನವನ್ನು ತೆಗೆದಿರಿಸಲಾಗುವುದು ಎಂದು ತಿಳಿಸಿದರು. ಭರವಸೆಗಳನ್ನು ಈಡೇರಿಸುವ ಪಕ್ಷವೆಂದರೆ ಎಐಎಡಿಎಂಕೆ ಮಾತ್ರ. ಮತ್ತಷ್ಟು ಹೊಸ ಕಲ್ಯಾಣಕ್ರಮಗಳನ್ನು ಸರ್ಕಾರ ಜಾರಿಗೊಳಿಸಲಿದೆ ಎಂದರು.
ಒಂದೆರಡು ತಿಂಗಳಿನಲ್ಲಿಯೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಕೃಷಿ ವಲಯದ ಮತಗಳನ್ನು ಒಲಿಸಿಕೊಳ್ಳಲು ಎಐಡಿಎಂಕೆ ಕೃಷಿ ಸಾಲದ ಕ್ರಮ ತೆಗೆದುಕೊಂಡಿದೆ.
ತಮಿಳುನಾಡು; ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ 2 ಜಿಬಿ ಇಂಟರ್ನೆಟ್ ಯೋಜನೆಗೆ ಚಾಲನೆ
ಎಂಕೆ ಸ್ಟಾಲಿನ್ ನೇತೃತ್ವದ ವಿರೋಧಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಪಳನಿಸ್ವಾಮಿ, ಪ್ರತಿ ರೈತರಿಗೂ ಎರಡು ಎಕರೆ ಭೂಮಿ ನೀಡುವುದಾಗಿ ಡಿಎಂಕೆ ಭರವಸೆ ನೀಡಿತ್ತು. ಆದರೆ ಆ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಂ. ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು.