ತಮಿಳುನಾಡು; ನೀಟ್ನಿಂದ ಶಾಶ್ವತ ವಿನಾಯಿತಿ ಮಸೂದೆ ಮಂಡಿಸಿದ ಸ್ಟಾಲಿನ್
ಚೆನ್ನೈ, ಸೆಪ್ಟೆಂಬರ್ 13: ನೀಟ್ ಪರೀಕ್ಷೆಯಿಂದ ತಮಿಳುನಾಡು ವಿದ್ಯಾರ್ಥಿಗಳಿಗೆ ಶಾಶ್ವತ ವಿನಾಯಿತಿ ಹಾಗೂ 12ನೇ ತರಗತಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ಮಸೂದೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ- ನೀಟ್ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆಯನ್ನು ಪರಿಚಯಿಸುವುದಾಗಿ ಭಾನುವಾರ ಸ್ಟಾಲಿನ್ ಸರ್ಕಾರ ಘೋಷಣೆ ಮಾಡಿತ್ತು.
NEET-UG 2021: ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ
'ನೀಟ್ ಪರೀಕ್ಷೆ ವಿರುದ್ಧ ನಮ್ಮ ಕಾನೂನು ಹೋರಾಟ ಆರಂಭವಾಗಿದೆ. ಈ ಕುರಿತು ನಿರ್ಣಯ ಅಂಗೀಕರಿಸಲಾಗುವುದು. ನೀಟ್ ಅನ್ನು ಕೇಂದ್ರ ತೆಗೆದುಹಾಕುವವರೆಗೂ ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಆದ್ದರಿಂದ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ' ಎಂದು ಮನವಿ ಮಾಡಿದ್ದರು. ಸೋಮವಾರ ಮಸೂದೆ ಮಂಡನೆ ಮಾಡಲಾಗಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಭಾನುವಾರ ನೀಟ್ ಪರೀಕ್ಷೆಗೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಯೊಬ್ಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಸೋಮವಾರ ಸದನದಲ್ಲೂ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸ್ಟಾಲಿನ್ ಪರೀಕ್ಷೆಯಿಂದ ವಿನಾಯಿತಿ ನೀಡುವ ಮಸೂದೆ ಮಂಡಿಸಿದ್ದಾರೆ.
ಸದನದಲ್ಲಿ ಈ ಕುರಿತು ಗದ್ದಲ ಏರ್ಪಟ್ಟಿದ್ದು, ಮಸೂದೆ ಮಂಡನೆ ವೇಳೆ ಎಐಎಡಿಎಂಕೆ ವಿಧಾನಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು. 'ಡಿಎಂಕೆ ಪಕ್ಷ ಈ ಮುನ್ನ, ರಾಜ್ಯದಲ್ಲಿ ನೀಟ್ ಪರೀಕ್ಷೆ ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಸೂಕ್ತ ತಯಾರಿ ಮಾಡಿಕೊಂಡಿರಲಿಲ್ಲ' ಎಂದು ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಆರೋಪಿಸಿದ್ದಾರೆ. 'ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕುಟುಂಬಕ್ಕೆ ನಗದು ಪರಿಹಾರ ನೀಡುವ ಜತೆಗೆ, ಕುಟುಂಬ ಸದಸ್ಯರೊಬ್ಬರಿಗೆ ಕೆಲಸ ಕೊಡಬೇಕೆಂದು' ಎಂದು ಒತ್ತಾಯಿಸುವ ಜೊತೆಗೆ, ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಬಂದು ಸಭಾತ್ಯಾಗ ಮಾಡಿದ್ದಾರೆ.
ಕೊರೊನಾ 2ನೇ ಅಲೆ ಮಧ್ಯೆ ನೀಟ್ ಪರೀಕ್ಷೆ ನಡೆಸುವ ಅಗತ್ಯವಿದೆಯೇ: ಎಂಕೆ ಸ್ಟಾಲಿನ್
ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, 'ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ನೀಟ್ ಪರೀಕ್ಷೆ ನಡೆದಿರಲಿಲ್ಲ. ಆದರೆ ಅವರದೇ ಪಕ್ಷದ ಕೆ. ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನಲ್ಲಿ ಮೊದಲ ಬಾರಿ ನೀಟ್ ಪರೀಕ್ಷೆ ನಡೆಯಿತು' ಎಂದಿದ್ದಾರೆ.
ಸದನದಲ್ಲಿ 'ನೀಟ್' ತೆಗೆದುಹಾಕುವ ಮಸೂದೆಯನ್ನು ಮಂಡಿಸಿ, ಸಾಮಾಜಿಕ ನ್ಯಾಯಕ್ಕಾಗಿ ಈ ಮಸೂದೆಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ನೀಟ್ ಪರೀಕ್ಷೆ ರದ್ದತಿಯೊಂದಿಗೆ, ಪಿಯುಸಿ ಅಥವಾ ಅರ್ಹತಾ ಪರೀಕ್ಷೆಗಳ ಆಧಾರದಲ್ಲೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಹೇಳಿದರು.
ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಡಿಎಂಕೆ, ನೀಟ್ ರದ್ದುಗೊಳಿಸುವ ಭರವಸೆ ನೀಡಿತ್ತು. ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಈ ಮುನ್ನ ಪತ್ರ ಬರೆದಿದ್ದರು. ನೀಟ್ ಪರೀಕ್ಷೆ ಬದಲಿಗೆ ಪಿಯುಸಿ ಅಂಕಗಳ ಮೆರಿಟ್ ಆಧಾರದಲ್ಲಿ ವೈದ್ಯಕೀಯ ಸೀಟ್ಗಳನ್ನು ಹಂಚಿಕೆ ಮಾಡುವಂತೆ ಸಲಹೆ ನೀಡಿದ್ದರು.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಡಿಎಂಕೆ, ಎಐಎಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ನೀಟ್ ಅನ್ನು ದೀರ್ಘಕಾಲದಿಂದ ವಿರೋಧಿಸುತ್ತಿವೆ ಎಂದು ಹೇಳಿದ್ದರು.
ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ದೇಶಾದ್ಯಂತ 201ಕ್ಕೂ ಹೆಚ್ಚು ನಗರಗಳಲ್ಲಿ ನೀಟ್ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಇತರ ಪರೀಕ್ಷೆಗಳೂ ಇರುವುದರಿಂದ ನೀಟ್ ಪರೀಕ್ಷೆ ಮುಂದೂಡಬೇಕೆಂದು ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಸಲ್ಲಿಸಿದ್ದು, ಸೆಪ್ಟೆಂಬರ್ 6ರಂದು ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.