ಮರೀನಾ ಕಡಲ ತೀರದಲ್ಲಿ ಜಯಲಲಿತಾ ಸ್ಮಾರಕ ಲೋಕಾರ್ಪಣೆ
ಚೆನ್ನೈ, ಜನವರಿ 27: ಮಾಜಿ ಮುಖ್ಯಮಂತ್ರಿ, ದಿವಂಗತ ಜೆ ಜಯಲಲಿತಾ ಅವರ ಸ್ಮಾರಕ ಲೋಕಾರ್ಪಣೆಗೊಳಿಸಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಇಂದು ಮರೀನಾ ಕಡಲ ತೀರದಲ್ಲಿ ಲೋಕಾರ್ಪಣೆ ಮಾಡಿದರು.
ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಂಗಲ್ ಗಿಫ್ಟ್ ನೀಡಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರವು ಜಯಲಲಿತಾ ಅವರ ಹೆಸರಿನಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸಲು ಮುಂದಾಗಿದೆ.
ತಮಿಳುನಾಡಿನ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ವಿಧಾನಸಭಾ ಸ್ಪೀಕರ್ ಪಿ ಧನಪಾಲ್ ಸೇರಿದಂತೆ ಎಐಎಡಿಎಂಕೆ ವರಿಷ್ಠ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಿಸೆಂಬರ್ 5, 2016ರಂದು ಮರೀನಾ ಕಡಲ ತೀರದಲ್ಲೇ ಸ್ಮಾರಕ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಲಾಯಿತು. ಪಕ್ಷದ ಸ್ಥಾಪಕ ಎಂಜಿ ರಾಮಚಂದ್ರನ್ ಅವರ ಸಮಾಧಿಯ ಸಮೀಪದಲ್ಲಿ ಜಯಲಲಿತಾ ಸ್ಮಾರಕ ಸ್ಥಾಪಿಸಲು 2018ರಲ್ಲಿ ನಿರ್ಣಯ ತೆಗೆದುಕೊಂಡು 50 ಕೋಟಿ ರು ಮಂಜೂರು ಮಾಡಲಾಗಿತ್ತು.
ತಮಿಳರ ಪಾಲಿನ ಅಮ್ಮ ಜಯಲಲಿತಾರಂತೆ ಚುನಾವಣಾ ಪ್ರಚಾರ ಶೈಲಿ, ಆಶ್ವಾಸನೆ ಮಂತ್ರ ಜಪಿಸುತ್ತಾ ಪಳನಿಸ್ವಾಮಿ ಚುನಾವಣಾ ಪ್ರಚಾರ ಕಣಕ್ಕಿಳಿದಿದ್ದಾರೆ. ಅಲ್ಪಸಂಖ್ಯಾತರು, ಜಾತಿ, ಮತ, ಪಂಥಕ್ಕೆ ಅನುಗುಣವಾಗಿ ಪ್ಯಾಕೇಜ್ ಘೋಷಣೆ ಮುಂದುವರೆದಿದೆ. ಪಳನಿಸ್ವಾಮಿ ಓಲೈಕೆ ಮುಂದುವರೆದಿದೆ
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ, ಸಣ್ಣ ಪುಟ್ಟ ಪಕ್ಷಗಳದ್ದೇ ಕಾರುಬಾರು. ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್, ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ನಟಿ ಖುಷ್ಬೂ, ಹೈದರಾಬಾದ್ ಪಾಲಿಕೆ ಚುನಾವಣೆ ವೇಳೆ ವಿಜಯಶಾಂತಿರನ್ನು ಸೆಳೆದ ಬಿಜೆಪಿ ಇನ್ನಷ್ಟು ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದೆ.
ಜಯಲಲಿತಾರ ವೇದ ನಿಲಯಂಗಾಗಿ ಮತ್ತೆ ಕಾನೂನು ಸಮರ
ಚುನಾವಣೆಗಾಗಿ ಸ್ಮಾರಕ ನಿರ್ಮಾಣ ಮಾಡಲು ಎಐಎಡಿಎಂಕೆ ಹೊರಟಿದೆ. ರಾಜಕೀಯ ಉದ್ದೇಶಕ್ಕಾಗಿ ಮಾತ್ರ ಜಯಲಲಿತಾರನ್ನು ಬಳಸಿಕೊಳ್ಳಲು ಯತ್ನಿಸಿದ್ದು, ಅವರಂಥ ದಿಗ್ಗಜರನ್ನು ಸರಿಯಾಗಿ ಗೌರವಿಸಿ, ಸ್ಮಾರಕ ರಚಿಸುವ ಗೋಜಿಗೆ ಸರ್ಕಾರ ಹೋಗಿಲ್ಲ. ಇದಲ್ಲದೆ, ಮನೆಯಲ್ಲಿರುವ ಚರಾಸ್ತಿಗಳ ಪಟ್ಟಿ ಬಹಿರಂಗಪಡಿಸಿದ್ದು, ಕಳ್ಳಕಾಕರ ಭಯವೂ ಕಾಡುತ್ತಿದೆ ಎಂದು ಜಯಲಲಿತಾ ಅವರ ಸೊಸೆ ದೀಪಾ ಹೇಳಿದ್ದಾರೆ. ಜನವರಿ 28ರಂದು ವೇದಾ ನಿಲಯಂ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ.