ಪ್ರತಿಭಟನೆ ನಡೆಸಿದ ರೈತರು ದುಷ್ಕರ್ಮಿಗಳು: ವಿವಾದ ಸೃಷ್ಟಿಸಿದ ಸಿಬಿಎಸ್ಸಿ ಶಾಲಾ ಪ್ರಶ್ನೆ ಪತ್ರಿಕೆ
ಚೆನ್ನೈ, ಫೆಬ್ರವರಿ 20: ರೈತರ ಪ್ರತಿಭಟನೆ ಕುರಿತು ಚೆನ್ನೈನ ಸಿಬಿಎಸ್ಇ ಶಾಲೆಯೊಂದರಲ್ಲಿನ ಪ್ರಶ್ನೆ ಪತ್ರಿಕೆ ಭಾರಿ ವಿವಾದ ಸೃಷ್ಟಿಸಿದೆ. ಕೃಷಿ ಕಾಯ್ದೆಗಳ ವಿರುದ್ಧ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರ ರೈತರನ್ನು 'ದುಷ್ಕರ್ಮಿಗಳು' ಮತ್ತು 'ಹಿಂಸಾಚಾರಿ ಹುಚ್ಚರು' ಎಂದು ಕರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಡಿಎವಿ ಬಾಲಕರ ಶಾಲೆಯಲ್ಲಿ ಹತ್ತನೇ ತರಗತಿಗೆ ನಡೆದ ಎರಡನೆಯ ಪುನರಾವರ್ತನೆಯ ಪರೀಕ್ಷೆಯ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಪತ್ರಿಕೆಯ ಪ್ರಶ್ನೆ ಪತ್ರಿಕೆಯೊಂದರಲ್ಲಿ ಸಂಪಾದಕರಿಗೆ ಪತ್ರ ಮಾದರಿಯಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಪ್ರಶ್ನೆ ರೂಪಿಸಲಾಗಿದೆ. ಫೆಬ್ರವರಿ 11ರಂದು ಈ ಪರೀಕ್ಷೆ ನಡೆದಿದ್ದು, ರೈತರ ಪ್ರತಿಭಟನೆಯ ಘಟನೆಯನ್ನು ರಾಜಕೀಯವಾಗಿ ಚಿತ್ರಿಸಿರುವುದು ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.
ದಿಶಾ ರವಿ ಬಂಧನದ ಬಗ್ಗೆ ಗ್ರೆಟಾ ಥನ್ಬರ್ಗ್ ಮೊದಲ ಪ್ರತಿಕ್ರಿಯೆ
ಪ್ರಶ್ನೆ ಪತ್ರಿಕೆಯ ಸೆಕ್ಷನ್ ಬಿ ವಿಭಾಗದಲ್ಲಿ ರೈತರ ಪ್ರತಿಭಟನೆ ಪ್ರಕರಣವನ್ನು ಉಲ್ಲೇಖಿಸಲಾಗಿದೆ. 'ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ದಿನದಂದು ಕೃಷಿ ಕಾಯ್ದೆ ಪ್ರತಿಭಟನಾಕಾರರು ಕ್ರೋಧಾವೇಶದಿಂದ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವ ಮೂಲಕ ನಡೆದ ಹಿಂಸಾಚಾರವು ನಾಗರಿಕರ ಹೃದಯಕ್ಕೆ ಘಾಸಿ ಮಾಡಿದ್ದು, ಅದಕ್ಕೆ ಖಂಡನೆ ಮತ್ತು ವಿರೋಧ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಅಗತ್ಯ ಮತ್ತು ಲಾಭಗಳಿಗಿಂತ ದೇಶ ಮೊದಲು ಎಂಬುದನ್ನು ಅರ್ಥಮಾಡಿಕೊಳ್ಳುವುದನ್ನು ಮರೆತ ದುಷ್ಕರ್ಮಿಗಳ ಭಯಾನಕ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸಿ ನಿಮ್ಮ ನಗರದ ದಿನ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆಯಿರಿ.
ಸಾರ್ವಜನಿಕ ಆಸ್ತಿಯ ನಾಶಪಡಿಸುವುದು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು, ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸುವಂತಹ ಕೆಲವು ಕಾನೂನುಬಾಹಿರ ಅಪರಾಧಗಳನ್ನು ಎಸಗಲಾಗಿದೆ. ಯಾವ ಕಾರಣಕ್ಕೂ ಇವುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಲಾಗಿದೆ.
ರೈತ ಹೋರಾಟಕ್ಕೆ ಕೊರೊನಾ ಕಾಟ: ಮಹಾರಾಷ್ಟ್ರದಲ್ಲಿ ಕಿಸಾನ್ ಮಹಾಪಂಚಾಯತ್ ಗೆ ತಡೆ!?
'ಬಾಹ್ಯ ಪ್ರಚೋದನೆಗಳ ಹಿನ್ನೆಲೆಯಲ್ಲಿ ಅಂತಹ ಹಿಂಸಾತ್ಮಕ ಹುಚ್ಚಾಟದ ಕೃತ್ಯ ನಡೆಸುವವರನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಸೂಚಿಸಿ' ಎಂದೂ ಪ್ರಶ್ನೆಯಲ್ಲಿ ಸೂಚಿಸಲಾಗಿದೆ.