ತಮಿಳುನಾಡಿನಲ್ಲಿ ವಾರಾಂತ್ಯ ಬೀಚ್, ದೇಗುಲ ಪ್ರವೇಶ ನಿರ್ಬಂಧ
ಚೆನ್ನೈ, ಆಗಸ್ಟ್ 31: ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಮತ್ತೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾರ್ವಜನಿಕರಿಗೆ ಭಾನುವಾರದಂದು ಬೀಚ್ಗಳಿಗೆ ಪ್ರವೇಶ ನಿರ್ಬಂಧಿಸಿರುವುದಾಗಿ ಘೋಷಿಸಿದ್ದು, ವಾರಾಂತ್ಯದಲ್ಲಿ ಪೂಜಾ ಸ್ಥಳಗಳಲ್ಲಿನ ನಿಷೇಧವನ್ನು ವಿಸ್ತರಿಸಿದೆ. ಧಾರ್ಮಿಕ ಉತ್ಸವಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 15, ಬೆಳಿಗ್ಗೆ 6ರವರೆಗೂ ಈ ನಿರ್ಬಂಧಗಳು ಜಾರಿಯಲ್ಲಿರುತ್ತದೆ ಎಂದು ಅಧೀಕೃತ ಪ್ರಕಟಣೆ ತಿಳಿಸಿದೆ.
'ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಕೊರೊನಾ ಹರಡುವಿಕೆ ನಿಯಂತ್ರಿಸಲು ಭಾನುವಾರ ಬೀಚ್ಗಳನ್ನು ಮುಚ್ಚಲಾಗುತ್ತದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗುವುದು. ಧಾರ್ಮಿಕ ಹಬ್ಬಗಳನ್ನು ನಡೆಸುವುದನ್ನು ಕೂಡ ನಿಷೇಧಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
ಬೀಚ್ಗಳಲ್ಲಿ ಭಾರಿ ಜನಸಂದಣಿ ಸೇರಿ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿರುವ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಬೀಚ್ಗಳಿಗೆ ಭಾನುವಾರದಂದು ನಿರ್ಬಂಧ ಹೇರಿ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಕೋವಿಡ್ ಲಸಿಕೆಯ ಪ್ರಥಮ ಡೋಸ್ ನೀಡಿಕೆ ಅಕ್ಟೋಬರ್ನಲ್ಲಿ ಸಂಪೂರ್ಣ ಸಾಧ್ಯತೆ
ಈ ಬಾರಿಯೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದ್ದು, ಕಳೆದ ವರ್ಷದಂತೆಯೇ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಅದ್ಧೂರಿಯಾಗಿ ಆಚರಿಸದೇ ಇರಲು ನಿರ್ಧರಿಸಲಾಗಿದೆ. ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದೇ ವೇಳೆ, ಸರ್ಕಾರ ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.
ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ 9ರಿಂದ 12ನೇ ತರಗತಿವರೆಗೆ ಸೆಪ್ಟೆಂಬರ್ 1ರಿಂದ ಕಾಲೇಜುಗಳನ್ನು ತೆರೆಯುವ ತಮ್ಮ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಪ್ರಕಟಣೆ ಸ್ಪಷ್ಟಪಡಿಸಿದೆ.
ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಕಾಲೇಜು ಹಾಸ್ಟೆಲ್ಗಳು, ಉದ್ಯೋಗಸ್ಥ ಪುರುಷ ಮಹಿಳೆಯರಿಗೆ ಇರುವ ಹಾಸ್ಟೆಲ್ಗಳಿಗೆ ಕೂಡ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಹಾಸ್ಟೆಲ್ ಸಿಬ್ಬಂದಿಗೆ ಲಸಿಕೆ ಹಾಕಿದೆಯೇ ಎಂಬುದನ್ನು ಮೊದಲು ಹಾಸ್ಟೆಲ್ ಆಡಳಿತ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಕೇರಳದಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ನೆರೆಯ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆಯೇ ಎಂದು ಕಾಲೇಜುಗಳು ಖಚಿತಪಡಿಸಿಕೊಳ್ಳಬೇಕು ಹಾಗೂ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಕೇರಳದಿಂದ ರಾಜ್ಯಕ್ಕೆ ಬರುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
ತಮಿಳುನಾಡು ಸರ್ಕಾರ ಈಗಾಗಲೇ ಕೇರಳದ ಗಡಿ ಜಿಲ್ಲೆಗಳಲ್ಲಿನ ಅಧಿಕಾರಿಗಳಿಗೆ ಲಸಿಕೆ ಹಾಕಿದ ಹಾಗೂ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡುವಂತೆ ಸೂಚನೆ ನೀಡಿದೆ.
ಸೋಮವಾರ ತಮಿಳುನಾಡಿನಲ್ಲಿ 1523 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 21 ಮಂದಿ ಸಾವನ್ನಪ್ಪಿದ್ದು, ಒಟ್ಟು ಮರಣ ಹೊಂದಿದವರ ಸಂಖ್ಯೆ 34,899 ಆಗಿದೆ. 23 ಜಿಲ್ಲೆಗಳಲ್ಲಿ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ನಿಯಂತ್ರಣ ಕಂಡುಬರುತ್ತಿಲ್ಲ. ದೇಶದ ಅರ್ಧದಷ್ಟು ಪ್ರಕರಣಗಳು ಕೇರಳ ಒಂದರಲ್ಲೇ ದಾಖಲಾಗುತ್ತಿರುವುದು ನೆರೆ ರಾಜ್ಯಗಳಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಕೊರೊನಾ ಸಾಂಕ್ರಾಮಿಕ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕು ನಿಯಂತ್ರಿಸಿದ ಕೇರಳ ಇಡೀ ದೇಶಕ್ಕೆ ಮಾದರಿ ಎನಿಸಿಕೊಂಡಿತ್ತು. 2020ರ ಓಣಂ ಹಬ್ಬದ ನಂತರದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಇದೀಗ ಮತ್ತೆ ಪ್ರಕರಣಗಳು ಏರಿಕೆಯಾಗಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲದಿರುವುದು ಮೂರನೇ ಅಲೆ ಆತಂಕವನ್ನು ತಂದಿದೆ.