ಪರೀಕ್ಷೆಯಿಲ್ಲ; 9, 10, 11ನೇ ತರಗತಿ ವಿದ್ಯಾರ್ಥಿಗಳೆಲ್ಲಾ "ಪಾಸ್" ಎಂದು ಘೋಷಿಸಿದ ಸರ್ಕಾರ
ಚೆನ್ನೈ, ಫೆಬ್ರವರಿ 25: ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿನ 9, 10 ಹಾಗೂ ಪ್ರಥಮ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಉತ್ತೀರ್ಣಗೊಳಿಸುವುದಾಗಿ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ.
ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿರುವ ಅವರು, 9, 10 ಹಾಗೂ 11ನೇ ತರಗತಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುವಂತಿಲ್ಲ. ಎಲ್ಲರನ್ನೂ ಉತ್ತೀರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಈ ಬಾರಿ ಶೈಕ್ಷಣಿಕ ಕ್ಷೇತ್ರದ ಮೇಲೆ ಕೊರೊನಾ ಸೋಂಕು ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...
ಕೊರೊನಾ ಎಫೆಕ್ಟ್: 8ನೇ ತರಗತಿವರೆಗೂ ಆಫ್ಲೈನ್ ಪರೀಕ್ಷೆ ಇಲ್ಲ
ಪರೀಕ್ಷೆ ಬರೆಯದೇ ಪಾಸ್
ಕೊರೊನಾ ಸೋಂಕು ಹರಡುವಿಕೆ ಕಾರಣದಿಂದಾಗಿ ಶೈಕ್ಷಣಿಕ ಕ್ಷೇತ್ರದ ಕುರಿತು ಹಲವರ ಅಭಿಪ್ರಾಯವನ್ನು ಪರಿಶೀಲಿಸಿ ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಎದುರಿಸುತ್ತಿರುವ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ತಜ್ಞರ ಅಭಿಪ್ರಾಯದ ಹೊರತಾಗಿಯೂ ಪೋಷಕರ ಅಭಿಪ್ರಾಯವನ್ನು ಕಲೆ ಹಾಕಿ, 2020-21ರ ಶೈಕ್ಷಣಿಕ ವರ್ಷದಲ್ಲಿ 9,10 ಹಾಗೂ 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.
"ಶಿಕ್ಷಕರ, ವಿದ್ಯಾರ್ಥಿಗಳ ಸಮಸ್ಯೆ ಗಮನಿಸಿ ಈ ಕ್ರಮ"
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪ್ರಾಯೋಗಿಕ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಪಠ್ಯದಲ್ಲಿಯೂ ಕಡಿತಗೊಳಿಸಲಾಗಿದೆ ಎಂದು ಸಿಎಂ ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ. ವರ್ಷದ ಹಿಂದೆ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಸಂದರ್ಭ ತಮಿಳುನಾಡು ಸರ್ಕಾರ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ತಿಳಿಸಿತ್ತು. ವರ್ಷವಿಡೀ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬೆಂಬಲಿತ ಶಿಕ್ಷಣ ಚಾನೆಲ್ ಮೂಲಕ ಪಾಠ ಮಾಡಲಾಗಿತ್ತು.
ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವ ಕುರಿತು ಸುರೇಶ್ ಕುಮಾರ್ ಸ್ಪಷ್ಟನೆ!
ಜನವರಿ 19ರಿಂದ 10ನೇ ತರಗತಿಗಳ ಆರಂಭ
ಮಾರ್ಚ್ 25, 2020ರಿಂದ ತಮಿಳುನಾಡಿನಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ನಂತರ ಇದೇ ಜನವರಿ 19ರಂದು ಹತ್ತನೇ ತರಗತಿ ಹಾಗು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳನ್ನು ತೆರೆಯಲಾಗಿತ್ತು. ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸತುವಿನ ಮಾತ್ರೆಗಳನ್ನು ನೀಡಲಾಗಿತ್ತು.
ನಿವೃತ್ತಿ ವಯೋಮಿತಿ ಹೆಚ್ಚಿಸಿದ ಸರ್ಕಾರ
ಇದೇ ಸಂದರ್ಭ ಶಿಕ್ಷಕರು ಹಾಗೂ ಪಿಎಸ್ಯು ಸಿಬ್ಬಂದಿ ಒಳಗೊಂಡಂತೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ತಮಿಳುನಾಡು ಸರ್ಕಾರ ಏರಿಕೆ ಮಾಡಿದೆ. ನಿವೃತ್ತಿ ವಯಸ್ಸನ್ನು ಒಂದು ವರ್ಷ ಏರಿಕೆ ಮಾಡಿದ್ದು, ಎಲ್ಲಾ ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳು, ಪಿಎಸ್ ಯುಗಳು ಹಾಗೂ ಮೇ 31ಕ್ಕೆ ನಿವೃತ್ತಿಯಾಗಲಿರುವ ನೌಕರರಿಗೂ ಇದು ಅನ್ವಯಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಕಳೆದ ಮೇನಲ್ಲಿ ಸರ್ಕಾರಿ ನೌಕರರ ವಯೋಮಿತಿಯನ್ನು 58 ವರ್ಷದಿಂದ 59ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ 60ಕ್ಕೆ ಏರಿಕೆ ಮಾಡಲಾಗಿದೆ.