ತಮಿಳುನಾಡು: ಭದ್ರತಾ ಶಿಷ್ಟಾಚಾರ ಮುರಿದು ಜನರತ್ತ ಸಾಗಿದ ಅಮಿತ್ ಶಾ
ಚೆನ್ನೈ, ನವೆಂಬರ್ 21: ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ಮಧ್ಯಾಹ್ನ 67,378 ರೂ. ವೆಚ್ಚದ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರ ಜತೆಗೆ ಅವರು ಚೆನ್ನೈ ಸಮೀಪ ನಗರಕ್ಕೆ ಅಗತ್ಯ ನೀರಿನ ಸೌಲಭ್ಯ ಕಲ್ಪಿಸುವ ಪ್ರಮುಖ ಜಲಾಶಯವನ್ನು ಉದ್ಘಾಟನೆ ಮಾಡಿದರು.
ಅಮಿತ್ ಶಾ ಆಗಮನದೊಂದಿಗೆ ಚೆನ್ನೈ ವಿಮಾನ ನಿಲ್ದಾಣ ಮತ್ತು ಕಾರ್ಯಕ್ರಮ ನಡೆದ ಸ್ಥಳದಲ್ಲಿ ವಿವಿಧ ಜಾನಪದ ತಂಡಗಳು ಕಲಾ ಪ್ರದರ್ಶನ ನೀಡುವ ಮೂಲಕ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದವು.
ಅಮಿತ್ ಶಾ ತಮಿಳುನಾಡು ಭೇಟಿ: 'ಗೋಬ್ಯಾಕ್ ಅಮಿತ್ ಶಾ' ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್
ಅಮಿತ್ ಶಾ ಚಾಲನೆ ನೀಡಿದ ಯೋಜನೆಗಳಲ್ಲಿ ಚೆನ್ನೈನ 61,843 ಕೋಟಿ ರೂ. ವೆಚ್ಚದ ಎರಡನೆಯ ಹಂತದ ಮೆಟ್ರೋ ರೈಲು ಕಾಮಗಾರಿ ಪ್ರಮುಖವಾಗಿದೆ. ತಮಿಳುನಾಡಿನ ಅತ್ಯಂತ ಉದ್ದನೆಯ ರಸ್ತೆ ಮಾರ್ಗವಾದ ಕೊಯಮತ್ತೂರಿನ ಹೃದಯಭಾಗದಲ್ಲಿ ಅವಿನಾಶಿ ಮಾರ್ಗದಲ್ಲಿ 1620 ಕೋಟಿ ರೂ ವೆಚ್ಚದ ಎಲೆವೇಟೆಡ್ ರಸ್ತೆ ಯೋಜನೆಗೂ ಚಾಲನೆ ನೀಡಿದರು.
ಅಮಿತ್ ಶಾ ಚೆನ್ನೈ ಭೇಟಿ: ರಜನೀಕಾಂತ್ ಭೇಟಿಯಾಗುತ್ತಾರೋ, ತಪ್ಪಿಸಿಕೊಳ್ಳುತ್ತಾರೋ?
ಇಂಡಿಯನ್ ಅಯಿಲ್ನ ಹೊಸ ಘಟಕ, ಲ್ಯೂಬ್ ಘಟಕಗಳ ಸ್ಥಾಪನೆ, ಚೆನ್ನೈ ವ್ಯಾಪಾರ ಕೇಂದ್ರದ ವಿಸ್ತರಣಾ ಕಾಮಗಾರಿ ಮತ್ತು ಎನ್ನೋರ್ನಲ್ಲಿ ಕಾಮರಾಜರ್ ಬಂದರು ಹಾಗೂ ಕರೂರು ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹೊಸ ಬ್ಯಾರೇಜ್ಗಳಿಗೆ ಕೂಡ ಚಾಲನೆ ನೀಡಿದರು. ಮುಂದೆ ಓದಿ.
ಭದ್ರತೆ ಶಿಷ್ಟಾಚಾರ ಉಲ್ಲಂಘನೆ
ಎರಡು ದಿನಗಳ ತಮಿಳುನಾಡು ಪ್ರವಾಸದ ಭಾಗವಾಗಿ ಶನಿವಾರ ಚೆನ್ನೈಗೆ ಭೇಟಿ ನೀಡಿದ ಅಮಿತ್ ಶಾ, ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜನನಿಬಿಡ ಜಿಎಸ್ಟಿ ರಸ್ತೆಯಲ್ಲಿ ಬೆಂಬಲಿಗರನ್ನು ಅಭಿನಂದಿಸಲು ವಾಹನದಿಂದ ಕೆಳಕ್ಕಿಳಿದು ನಡೆದು ಸಾಗುವ ಮೂಲಕ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದರು.
ಬೆಂಬಲಿಗರತ್ತ ಸಾಗಿದ ಅಮಿತ್ ಶಾ
ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಅಮಿತ್ ಶಾ ಅವರ ಕಾರು ಇದ್ದಕ್ಕಿದ್ದಂತೆ ನಿಂತು, ಅವರು ಕಾರಿನಿಂದ ಕೆಳಕ್ಕಿಳಿದರು. ಸ್ವಲ್ಪ ದೂರದವರೆಗೆ ನಡೆದು ಸಾಗಿದರು. ಅವರನ್ನು ಸ್ವಾಗತಿಸಲು ಬಂದಿದ್ದ ಬಿಜೆಪಿ ಮತ್ತು ಎಐಎಡಿಎಂಕೆ ಬೆಂಬಲಿಗರು ತಮ್ಮ ಪಕ್ಷಗಳ ಬಾವುಟಗಳನ್ನು ಹಾರಿಸಿದರು. ಅಮಿತ್ ಶಾ ಅವರ ನಡೆಯಿಂದ ಭದ್ರತಾ ಪಡೆಗಳು ಅರೆಕ್ಷಣ ಕಂಗಾಲಾದವು.
ತಮಿಳಿನಲ್ಲಿ ಟ್ವೀಟ್
'ತಮಿಳುನಾಡಿನಲ್ಲಿ ಇರಲು ಯಾವಾಗಲೂ ಸಂತಸವಾಗುತ್ತದೆ. ಈ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಚೆನ್ನೈ' ಎಂದು ಜಿಎಸ್ಟಿ ರಸ್ತೆಯಲ್ಲಿ ನಡೆದು ಸಾಗುವ ಫೋಟೊವನ್ನು ಹಂಚಿಕೊಂಡಿರುವ ಅಮಿತ್ ಶಾ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಗೋ ಬ್ಯಾಕ್ ಅಮಿತ್ ಶಾ
ಇದಕ್ಕೂ ಮುನ್ನ 2019ರ ಆಗಸ್ಟ್ ತಿಂಗಳಲ್ಲಿ ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿದ್ದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಬಾರಿ ಅಮಿತ್ ಶಾ ಭೇಟಿಯನ್ನು ವಿರೋಧಿಸಿ ಡಿಎಂಕೆ ಪ್ರತಿಭಟನೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಅಮಿತ್ ಶಾ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಚೆನ್ನೈಗೆ ಆಗಮಿಸಿದ ಶಾ ಅವರನ್ನು ತಮಿಳು ನಾಡು ರಾಜ್ಯ ಉಸ್ತುವಾರಿ ಸಿಟಿ ರವಿ, ಪಕ್ಷದ ರಾಜ್ಯಾಧ್ಯಕ್ಷ ಮುರುಗನ್ ಸೇರಿದಂತೆ ಮುಖಂಡರು ಸ್ವಾಗತಿಸಿದರು.