ತಮಿಳುನಾಡಲ್ಲಿ ಸೆ.7ರಿಂದ ಬಸ್, ರೈಲು ಸಂಚಾರಕ್ಕೆ ಒಪ್ಪಿಗೆ
ಚೆನ್ನೈ, ಸೆಪ್ಟೆಂಬರ್ 02: ತಮಿಳುನಾಡು ಸರ್ಕಾರ ಸೆಪ್ಟೆಂಬರ್ 7ರಿಂದ ಅಂತರ ಜಿಲ್ಲಾ ಬಸ್, ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದೆ. ಲಾಕ್ ಡೌನ್ ಘೋಷಣೆ ಬಳಿಕ ಮೊದಲ ಬಾರಿಗೆ ಸರ್ಕಾರಿ, ಖಾಸಗಿ ಬಸ್ ಸೇವೆ ಆರಂಭಿಸಲಾಗುತ್ತಿದೆ.
Recommended Video
ಬುಧವಾರ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯದೊಳಗೆ ಕೆಲವು ಮಾರ್ಗದಲ್ಲಿ ಮಾತ್ರ ಬಸ್, ರೈಲು ಸಂಚಾರಕ್ಕೆ ಇಷ್ಟು ದಿನ ಅವಕಾಶ ನೀಡಲಾಗಿತ್ತು.
ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ
ಜನರ ಬೇಡಿಕೆ ಹಿನ್ನಲೆಯಲ್ಲಿ ಬಸ್, ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಗಳು ಸೆಪ್ಟೆಂಬರ್ 7ರಿಂದ ಸಂಚಾರ ನಡೆಸಬಹುದು ಎಂದು ಸರ್ಕಾರ ಹೇಳಿದೆ. ಸೆಪ್ಟೆಂಬರ್ 15ರ ನಂತರ ಅಂತರ ರಾಜ್ಯ ಬಸ್, ರೈಲುಗಳ ಸಂಚಾರಕ್ಕೆ ಅವಕಾಶ ಕೊಡಲಾಗಿದೆ.
ತಮಿಳುನಾಡು ರಾಜ್ಯದೊಳಗೆ ಸಂಚಾರ ನಡೆಸಲು ಸರ್ಕಾರ ಇ-ಪಾಸುಗಳ ವ್ಯವಸ್ಥೆ ಮಾಡಿತ್ತು. ಈಗ ಪಾಸುಗಳನ್ನು ತೆಗೆದುಹಾಕಲಾಗಿದ್ದು, ಸರ್ಕಾರಿ, ಖಾಸಗಿ ಬಸ್ಗಳಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಚೆನ್ನೈ ನಗರದಲ್ಲಿಯೂ ಮೆಟ್ರೋ ರೈಲುಗಳ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ. ಬೇರೆ ರಾಜ್ಯಗಳಿಗೆ ಸಹ ಆಯ್ದ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಅಕ್ಕ-ಪಕ್ಕದ ರಾಜ್ಯಗಳು ಸಹ ತಮಿಳುನಾಡಿಗೆ ಬಸ್ ಸೇವೆಯನ್ನು ಆರಂಭಿಸಬಹುದಾಗಿದೆ.
ಪ್ರಯಾಣದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸರ್ಕಾರ ನಿರ್ದೇಶನವನ್ನು ನೀಡಿದೆ.
ತಮಿಳುನಾಡಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 4,33,969. ಸೆಪ್ಟೆಂಬರ್ 1ರ ಹೆಲ್ತ್ ಬುಲೆಟಿನ್ನಂತೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 52,379.