ತಮಿಳುನಾಡು: ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ರಾಜೇಂದ್ರನ್ ಸಾವು
ವಿಳುಪ್ಪರಂ, ಫೆಬ್ರವರಿ 23: ಎಐಎಡಿಎಂಕೆ ಸಂಸದ ಎಸ್ ರಾಜೇಂದ್ರನ್ (62) ಅವರು ತಮಿಳುನಾಡಿನ ವಿಳುಪ್ಪುರಂ ಜಿಲ್ಲೆಯ ತಿಂಡಿವನಂ ಸಮೀಪ ಶನಿವಾರ ನಡೆದ ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶನಿವಾರ ನಸುಕಿನ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ತಮಿಳುನಾಡು ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ.
ಹಾಸನದಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಥೈಲಿಪುರಂನಲ್ಲಿ ಪಿಎಂಕೆ ಪಕ್ಷದ ನಾಯಕ ರಾಮದಾಸ್ ಅವರನ್ನು ಶುಕ್ರವಾರ ರಾತ್ರಿ ಆಯೋಜಿಸಿದ್ದ ಭೋಜನಾಕೂಟದಲ್ಲಿ ಭಾಗವಹಿಸಿದ್ದ ರಾಜೇಂದ್ರನ್, ವಾಣೂರ್ನಲ್ಲಿನ ತಮ್ಮ ನಿವಾಸಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಸಿದ್ದಾರೆ. ರಾಜೇಂದ್ರನ್ ಅವರ ತಲೆ ಮತ್ತು ಎದೆಗೆ ತೀವ್ರ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವಾಹನ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಇನ್ನೂ ಮೂವರಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹೆಬ್ಬಾಳ ಫ್ಲೈಓವರ್ನಲ್ಲಿ ಸರಣಿ ಅಪಘಾತ: 10ಕ್ಕೂ ಹೆಚ್ಚು ಕಾರುಗಳು ಜಖಂ
ಎಐಎಡಿಎಂಕೆ ಮುಖಂಡರಾದ ರಾಜೇಂದ್ರನ್ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ವಿಳುಪ್ಪುರಂ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಸಂಸತ್ಗೆ ಆಯ್ಕೆಯಾಗಿದ್ದರು. ರಾಸಾಯನಿಕ ಮತ್ತು ರಸಗೊಬ್ಬರ ಸ್ಥಾಯಿ ಸಮಿತಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ 2014ರ ಸೆಪ್ಟೆಂಬರ್ 1ರಿಂದ ಕಾರ್ಯನಿರ್ವಹಿಸಿದ್ದಾರೆ.
ಗಂಗೊಳ್ಳಿಯಲ್ಲಿ ಹಿಟ್ ಆಂಡ್ ರನ್:ಬೈಕ್ ಸವಾರ ಸ್ಥಳದಲ್ಲೇ ಸಾವು
ಇದಕ್ಕೂ ಮೊದಲು ಅವರು 2001-2006ರ ಸಾಲಿನಲ್ಲಿ ವಿಳುಪ್ಪುರಂ ಜಿಲ್ಲಾ ಪಂಚಾಯತ್ನ ಅಧ್ಯಕ್ಷರೂ ಆಗಿದ್ದರು. ಅವರಿಗೆ ಪತ್ನಿ ಶಾಂತಾ ರಾಜೇಂದ್ರನ್ ಮತ್ತು ಮೂವರು ಮಕ್ಕಳಿದ್ದಾರೆ.