ಕೌಟುಂಬಿಕ ಕಲಹಕ್ಕೆ ನೊಂದು ಪ್ರತಿಭಾವಂತ ನಟ ಆತ್ಮಹತ್ಯೆ
ಚೆನ್ನೈ, ಸೆ. 29: ನಟ ಶಿವ ಕಾರ್ತಿಕೇಯನ್ ಅವರ ಮರಿನಾ ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ತೆನ್ನರಸು ಎಂಬ ನಟ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ತೆನ್ನರಸು ಅವರಿಗೆ 2 ವರ್ಷ ವಯಸ್ಸಿನ ಮಗು ಇದೆ. ಯುವ ನಟ ಇಂದು ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಲಗಳ ಪ್ರಕಾರ ಪತ್ನಿ ಜೊತೆ ಜೋರು ಜಗಳವಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚೆನ್ನೈನ ಮೈಲಾಪುರದಲ್ಲಿ ನೆಲೆಸಿದ್ದ ತೆನ್ನರಸು ಅವರ ನೆರೆ ಮನೆಯವರ ಹೇಳಿಕೆ ಪಡೆಯಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದರು.
ಬಿಹಾರ ಮೂಲದ ಮತ್ತೊಬ್ಬ ನಟ ಮುಂಬೈನಲ್ಲಿ ಆತ್ಮಹತ್ಯೆ
ಪಾಂಡಿರಾಜ್ ನಿರ್ದೇಶನದ ಶಿವ ಕಾರ್ತಿಕೇಯನ್, ಒವಿಯಾ ಅಭಿನಯದ ಮರಿನಾ ಚಿತ್ರ ಬಿಟ್ಟರೆ ಉಳಿದ ಚಿತ್ರಗಳಲ್ಲಿ ಅಷ್ಟಾಗಿ ಹೆಸರು ಮಾಡಿರಲಿಲ್ಲ. 2012ರ ಈ ಚಿತ್ರ ಬಿಟ್ಟರೆ ಉತ್ತಮ ಅವಕಾಶಗಳು ಸಿಕ್ಕಿರಲಿಲ್ಲ.
ಪ್ರೀತಿಸಿ ಮದುವೆಯಾಗಿದ್ದ ತೆನ್ನರಸು ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದ ಎಂಬ ಸುದ್ದಿಯಿದೆ. ಪೋಷಕ ನಟ, ನಟಿಯರು, ತಾಂತ್ರಿಕ ವರ್ಗದವರು ಕೊರೊನಾವೈರಸ್ ಸೋಂಕು, ಲಾಕ್ಡೌನ್ ದೆಸೆಯಿಂದ ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಈ ಬಗ್ಗೆ ಕಲಾವಿದರ ಸಂಘ ತಕ್ಷಣವೇ ಗಮನ ಹರಿಸುವುದು ಒಳ್ಳೆಯದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.