ಜಲ್ಲಿಕಟ್ಟು ಆರಂಭಿಸುವಂತೆ ಕರುಣಾನಿಧಿ ಪಟ್ಟು
ಚೆನ್ನೈ,ಜ.13: ತಮಿಳುನಾಡಿನಲ್ಲಿ ಸಂಕ್ರಾಂತಿ ಸಂದರ್ಭದಲ್ಲಿ ನಡೆಯುವ ವಾರ್ಷಿಕ ಜಲ್ಲಿ ಕಟ್ಟು ಗೂಳಿ ಕಾಳಗ ಸ್ಪರ್ಧೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಗ್ರಹಿಸಿದ್ದಾರೆ.
ಪೊಂಗಲ್ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟನ್ನು ತಮಿಳುನಾಡಿನ ಮಧುರೈ ಸೇರಿದಂತೆ ಹಲವು ಪ್ರಾಂತಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿತ್ತು. ಜಲ್ಲಿಕಟ್ಟಿನಲ್ಲಿ ಗೂಳಿಗಳನ್ನು ಹಿಂಸಿಸಲಾಗುತ್ತದೆ ಎಂಬುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್ ಕಳೆದ ಮೇನಲ್ಲಿ ಇದರ ಆಯೋಜನೆಗೆ ನಿಷೇಧವನ್ನು ವಿಧಿಸಿತ್ತು. ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವ ಹಕ್ಕು ಗೂಳಿಗಳಿಗಿದೆ ಎಂದು ಅದು ತನ್ನ ಆದೇಶದಲ್ಲಿ ಹೇಳಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು, ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರಾಣಿಗಳ ಕಾಳಗಗಳ ಪಟ್ಟಿಯಿಂದ ಜಲ್ಲಿ ಕಟ್ಟು ಪ್ರತ್ಯೇಕಿಸುವಂತೆ ಕೇಳಲಾಗಿದೆ ಎಂದಿದ್ದಾರೆ.
ತಮಿಳುನಾಡಿನ ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ. ಹಬ್ಬದ ಸಂದರ್ಭದಲ್ಲಿ ಬೇಕಾದ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಲ್ಲಿ ಕಟ್ಟು ಕ್ರೀಡೆಯಿಂದ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ಕರುಣಾನಿಧಿ ಹೇಳಿದ್ದಾರೆ.(ಪಿಟಿಐ)