ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಮನರಂಜನೆಗೆ ಕೊರತೆಯಿಲ್ಲ
ಬೆಂಗಳೂರು, ಜ, 12: ಬೆಂಗಳೂರು-ಚೆನ್ನೈ ನಡುವಿನ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಅವರ ಆಯ್ಕೆಯ ಮನರಂಜನೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದ್ದು ಕೆಲ ಪ್ರಯಾಣಿಕರು ಭಾನುವಾರ ಟ್ಯಾಬ್ಲೆಟ್ ಮೂಲಕ ಸಿನಿಮಾ ವೀಕ್ಷಣೆ ಮಾಡುತ್ತ ಮತ್ತು ಇ-ಪುಸ್ತಕ ಒದುತ್ತಿರುವುದು ಕಂಡುಬಂತು.
ಪೈಲೆಟ್ ಪ್ರೊಜೆಕ್ಟ್ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ 15 ಟ್ಯಾಬ್ಲೆಟ್ ಒದಗಿಸಲಾಗಿದ್ದು ಪ್ರಯಾಣಿಕರ ಪ್ರತಿಕ್ರಿಯೆ ಲೆಕ್ಕಹಾಕಲಾಯಿತು. ಜನವರಿ 9 ರಂದು ಯೋಜನೆ ಜಾರಿಯಾಗಿದ್ದು ಮುಂದಿನ ಶನಿವಾರದವರೆಗೆ ಚಾಲ್ತಿಯಲ್ಲಿರುತ್ತದೆ.[ಮೈಸೂರು : ಮತ್ತೊಂದು ರೈಲ್ವೆ ಟಿಕೆಟ್ ಕೌಂಟರ್ ಆರಂಭ]
ಮಕ್ಕಳು ಇಷ್ಟಪಡುವಂತಹ ಸಂಗತಿಗಳನ್ನು ಅಳವಡಿಸಬೇಕು, ಇದು ಸಮಯದ ಸದುಪಯೋಗಕ್ಕೆ ಕಾರಣವಾಗಿದೆ. ಇದೊಂದು ಉತ್ತಮ ಯೋಜನೆ ಎಂಬ ಅಭಿಪ್ರಾಯ ಜನರಿಂದ ಕೇಳಿಬಂತು.
ರೈಲ್ವೆ ಇಲಾಖೆ ಇಂಥ ಪ್ರಯತ್ನಗಳ ಮೇಲೆ ಹಣ ಹೂಡುವ ಮೊದಲು ಸ್ವಚ್ಛತೆಗೆ ಇನ್ನು ಹೆಚ್ಚಿನ ಆದ್ಯತೆ ನೀಡಿದರೆ ಉತ್ತಮ. ಪ್ರಯಾಣಿಕರಿಗೆ ಮೊದಲು ಮೂಲಭೂತ ಅಗತ್ಯಗಳನ್ನು ಪೂರೈಸಿ ಈ ಬಗೆಯ ಯೋಜನೆ ಕೈಗೆತ್ತಿಕೊಳ್ಳಬೇಕು. ಅಷ್ಟಕ್ಕೂ ಮನರಂಜನೆ ಒದಗಿಸಿ ಎಂದು ಯಾರೂ ದುಂಬಾಲು ಬಿದ್ದಿರಲಿಲ್ಲ ಎಂಬ ಮಾತುಗಳು ಕೇಳಿಬಂದವು.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಟ್ಯಾಬ್ಲೆಟ್ ಬಳಸುವವರು ಗಂಟೆಗೆ 20 ರೂ. ಪಾವತಿ ಮಾಡಬೇಕು. ನೂರಾರು ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ವಿಸ್ತಾರ ಮಾಡಲಾಗುವುದು. ಜನರು ಟಿವಿಗಿಂತ ಟ್ಯಾಬ್ಲೆಟ್ ಇಷ್ಟಪಡುತ್ತಿದ್ದಾರೆ. ಅವರಿಗೆ ಬೇಕಾದ ಆಯ್ಕೆ ಇಲ್ಲಿ ದೊರೆಯುವುದುದೇ ಕಾರಣ ಎಂದು ಟ್ಯಾಬ್ಲೆಟ್ ವಿತರಕ ಕಂಪನಿಯ ಫೌಂಡರ್ ಬಿ.ವಿ.ಮುರಳಿ ತಿಳಿಸಿದರು. ಒಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಂದಿರುವ ಯೋಜನೆ ತರಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಇದರ ಹಿಂದೆ ವ್ಯಾಪಾರಿ ತಂತ್ರ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.