ಎಂಕೆ ಅಳಗಿರಿಯನ್ನು ಬಿಜೆಪಿಗೆ ಕರೆತರುತ್ತೇನೆ: ಮಾಜಿ ಡಿಎಂಕೆ ಮುಖಂಡ ಹೇಳಿಕೆ
ಚೆನ್ನೈ, ನವೆಂಬರ್ 21: ದ್ರಾವಿಡ್ ಮುನ್ನೇಟ್ರ ಕಳಗಂನ (ಡಿಎಂಕೆ) ಮಾಜಿ ಸಂಸದ ಕೆ.ಪಿ. ರಾಮಲಿಂಗಂ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರನ್ನು ಮಾರ್ಚ್ ತಿಂಗಳಲ್ಲಿ ಪಕ್ಷದ ನಾಯಕ ಎಂಕೆ ಸ್ಟಾಲಿನ್ ಅಮಾನತುಗೊಳಿಸಿದ್ದರು. ಎಂಕೆ ಅಳಗಿರಿ ಅವರ ನಿಷ್ಠಾವಂತರಾಗಿರುವ ಕೆ.ಪಿ. ರಾಮಲಿಂಗಂ, ಅಳಗಿರಿ ಅವರನ್ನೂ ಬಿಜೆಪಿಗೆ ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಸಿ.ಟಿ. ರವಿ ಮತ್ತು ರಾಜ್ಯಘಟಕದ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಕೆಪಿ ರಾಮಲಿಂಗಂ ಅವರು ಶನಿವಾರ ಪಕ್ಷ ಸೇರ್ಪಡೆಯಾದರು. ರಾಮಲಿಂಗಂ ಅವರು ಬಿಜೆಪಿ ಸೇರುವ ವೇಳೆ ಪೊನ್ ರಾಧಾಕೃಷ್ಣನ್ ಮತ್ತು ಎಚ್ ರಾಜಾ ಕೂಡ ಪಕ್ಷದ ಇತರೆ ನಾಯಕರೊಂದಿಗೆ ಕಾಣಿಸಿಕೊಂಡರು.
ಅಮಿತ್ ಶಾ ತಮಿಳುನಾಡು ಭೇಟಿ: 'ಗೋಬ್ಯಾಕ್ ಅಮಿತ್ ಶಾ' ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್
ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಎಂಕೆ ಸ್ಟಾಲಿನ್ ಅವರು ಮುಂದಿಟ್ಟ ಪ್ರಸ್ತಾಪದ ವಿರುದ್ಧ ಮಾತನಾಡಿದ್ದಕ್ಕಾಗಿ ಕೆಪಿ ರಾಮಲಿಂಗಂ ಅವರನ್ನು ಮಾರ್ಚ್ ತಿಂಗಳಲ್ಲಿ ಡಿಎಂಕೆ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಿತ್ತು.
ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ರಾಮಲಿಂಗಂ, ಎಂಕೆ ಸ್ಟಾಲಿನ್ ಅವರ ಸಹೋದರ ಎಂಕೆ ಅಳಗಿರಿ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು. 'ನನಗೆ ಎಂಕೆ ಅಳಗಿರಿ ಅವರೊಂದಿಗೆ ಆಪ್ತ ಒಡನಾಟವಿದೆ. ಅವರನ್ನು ಭಾರತೀಯ ಜನತಾ ಪಾರ್ಟಿಗೆ ಕರೆತರಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.
ಕರುಣಾನಿಧಿ ಪುತ್ರರ ಕಾಳಗ, ಅಳಗಿರಿಯಿಂದ ಹೊಸ ಪಕ್ಷ ಉದಯ?
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟುವ ಪ್ರಯತ್ನದಲ್ಲಿ ಶ್ರಮವಹಿಸುವುದಾಗಿ ತಿಳಿಸಿದ ಅವರು, 30 ವರ್ಷಗಳ ಹಿಂದೆ ಡಿಎಂಕೆ ಸೇರ್ಪಡೆಯಾದಾಗ ಡಿಎಂಕೆಗೆ ತೀವ್ರ ಹಿನ್ನಡೆಯಾಗಿತ್ತು. ಆದರೆ ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾಗಿ ತಿಳಿಸಿದರು. ಗೃಹ ಸಚಿವ ಅಮಿತ್ ಶಾ ಅವರು ತಮಿಳನಾಡಿನ ರಾಜಧಾನಿ ಚೆನ್ನೈನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಮುನ್ನವೇ ರಾಮಲಿಂಗಂ ಬಿಜೆಪಿ ಸೇರಿಕೊಂಡಿದ್ದಾರೆ.