ಅನಾರೋಗ್ಯ ಕಾರಣ ನೀಡಿದ ಸರವಣ ಭವನ ಮಾಲೀಕ; ಕಾಲಾವಕಾಶ ನೀಡದ ಸುಪ್ರೀಂ
2001ರಲ್ಲಿ ತನ್ನ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನೇ ಅಪಹರಿಸಿ, ಕೊಲೆ ಮಾಡಿಸಿದ್ದ ಆರೋಪದಲ್ಲಿ ಜೀವಾವಧಿ ಜೈಲು ಶಿಕ್ಷೆ ಆಗಿರುವ ಸರವಣ ಭವನ ಹೋಟೆಲ್ ಸಮೂಹದ ಮಾಲೀಕ, 72 ವರ್ಷದ ಪಿ.ರಾಜ್ ಗೋಪಾಲ್ ಶರಣಾಗತಿಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಕೇಳಿ ಹಾಕಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅನಾರೋಗ್ಯದ ಕಾರಣ ನೀಡಿದ್ದ ರಾಜ್ ಗೋಪಾಲ್ ತಮ್ಮ ಶಿಕ್ಷೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದರು.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಅವರಿಗೆ ಆ ಪ್ರಮಾಣದ ಅನಾರೋಗ್ಯ ಇದ್ದರೆ ಅರ್ಜಿಯ ವಿಚಾರಣೆ ನಡೆಯುವ ಸಮಯದಲ್ಲಿ ಒಂದು ದಿನ ಕೂಡ ಆ ಬಗ್ಗೆ ಏಕೆ ಅರ್ಜಿ ಹಾಕಿಲ್ಲ ಎಂದು ಪ್ರಶ್ನಿಸಿದೆ. ಹತ್ತು ವರ್ಷದ ಹಿಂದೆ ರಾಜ್ ಗೋಪಾಲ್ ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಆದರೆ ಜುಲೈ 7ನೇ (ಭಾನುವಾರ) ತಾರೀಕು ರಾಜ್ ಗೋಪಾಲ್ ಶರಣಾಗಬೇಕಿತ್ತು.
ಸರವಣ ಭವನ ರಾಜ್ ಗೋಪಾಲ್ ಗೆಲುವಿನ ದಿನಗಳಿಂದ ಜೈಲಿನ ಹಾದಿ ತನಕ
ಸೋಮವಾರದಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಜ್ ಗೋಪಾಲ್, ನಾನು ಆಸ್ಪತ್ರೆಗೆ ಸೇರಿದ್ದೇನೆ. ನನಗೆ ಶರಣಾಗಲು ಹೆಚ್ಚಿನ ಸಮಯ ಬೇಕು ಎಂದು ಕೇಳಿದ್ದರು. ಆದರೆ ಆ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಂದಹಾಗೆ ತನ್ನ ಬಳಿ ಉದ್ಯೋಗಕ್ಕೆ ಇದ್ದ ಶಾಂತಕುಮಾರ್ ನನ್ನು ಕೊಲೆ ಮಾಡಿಸಿದ್ದ ಆರೋಪ ಬಂದಿತ್ತು. ಶಾಂತಕುಮಾರ್ ನ ಪತ್ನಿ ಜೀವಜ್ಯೋತಿಯನ್ನು ಮದುವೆ ಆಗುವ ಉದ್ದೇಶದಿಂದ ಕೊಲೆ ಮಾಡಿಸಿದ ಆರೋಪ ರಾಜ್ ಗೋಪಾಲ್ ಮೇಲೆ ನಿಗದಿ ಆಗಿತ್ತು.
ಈ ಪ್ರಕರಣದಲ್ಲಿ ಆರಂಭದಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ಆಗಿತ್ತು. ಆ ನಂತರ ಜೀವಾವಧಿ ಜೈಲು ಶಿಕ್ಷೆ ಆಗಿ ಬದಲಾಗಿತ್ತು. ಆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ರಾಜ್ ಗೋಪಾಲ್. ಶಿಕ್ಷೆ ಪ್ರಮಾಣವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಜುಲೈ ಏಳನೇ ತಾರೀಕು ಶರಣಾಗಿ, ಜೀವಾವಧಿ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಿತ್ತು.