ಸೂಪರ್ ಸ್ಟಾರ್ ರಜನಿಕಾಂತ್ ಗೆ 67, ಹುಟ್ಟುಹಬ್ಬ ಆಚರಣೆಯಿಂದ ರಜನಿ ದೂರ
ಚೆನ್ನೈ, ಡಿಸೆಂಬರ್ 12: ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು 67ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ವರ್ಷ ಅದ್ದೂರಿ ಹುಟ್ಟುಹಬ್ಬ ಸಮಾರಂಭ, ಆಚರಣೆಗಳಿಂದ ರಜನಿ ದೂರು ಉಳಿದಿದ್ದಾರೆ. ಓಖಿ ಚಂಡಮಾರತದಿಂದ ತಮಿಳುನಾಡು ತತ್ತರಿಸಿರುವುದೇ ಇದಕ್ಕೆ ಕಾರಣ.
ಓಖಿ ಚಂಡಮಾರತದಿಂದ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 400ಕ್ಕೂ ಅಧಿಕ ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಅನೇಕ ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.
ಸತತ ಮೂರನೇ ವರ್ಷ ಕೂಡಾ ಅಭಿಮಾನಿಗಳಿಗೆ ಹುಟ್ಟುಹಬ್ಬದ ದಿನದಂದು ರಜನಿ ಮುಖದರ್ಶನ ಭಾಗ್ಯ ಅಲಭ್ಯವಾಗಲಿದೆ. ಆಪ್ತೇಷ್ಟರ ಜತೆ ರಜನಿ ಅವರು ಕಾಲ ಕಳೆಯಲಿದ್ದಾರೆ. ಚೆನ್ನೈ ಪ್ರವಾಹ, ಜೆ ಜಯಲಲಿತಾ ಸಾವು ಈ ಬಾರಿ ಓಖಿ ಚಂಡಮಾರುತದಿಂದಾಗಿ ರಜನಿ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಬೇಡ ಎಂದು ಸತತ ಮೂರು ವರ್ಷ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ಸದ್ಯ ರಜನಿ ಅವರು ಶಂಕರ್ ನಿರ್ದೇಶನದ 2.0, ಪಾ ರಂಜಿತ್ ನಿರ್ದೇಶನದ ಕಾಲ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು. ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದಾರೆ.