ಸಕ್ರಿಯ ರಾಜಕೀಯಕ್ಕೆ ರಜನಿ ಎಂಟ್ರಿ ಬಗ್ಗೆ ನಿರ್ಧಾರ ನಾಳೆ ಪ್ರಕಟ?
ಚೆನ್ನೈ, ನ. 29: ಸಕ್ರಿಯ ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಯಾವಾಗ ಪ್ರವೇಶಿಸುತ್ತಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳುವ ಸಾಧ್ಯತೆಯಿದೆ.
ರಜನಿ ಅವರು ರಾಜಕೀಯ ಪ್ರವೇಶ ಕುರಿತಂತೆ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಸಮಯದಿಂದ ಚರ್ಚೆಯಾಗುತ್ತಿದೆ. ರಾಜಕೀಯ ಚಟುವಟಿಕೆ ಕುರಿತು ಸೂಕ್ತ ಸಮಯದಲ್ಲಿ ಪ್ರಕಟಣೆ ನೀಡುವುದಾಗಿ ರಜನಿ ತಿಳಿಸಿದ್ದರು.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಮುಖ ಪಕ್ಷಗಳು ಸದ್ದಿಲ್ಲದೇ ತಯಾರಿ ನಡೆಸಿವೆ. ಇದೆ ವೇಳೆ ರಜನಿ ಸಕ್ರಿಯ ರಾಜಕೀಯಕ್ಕೆ ಕಾಲಿರಿಸಲಿದ್ದು, ಹೊಸ ಪಕ್ಷ ಸ್ಥಾಪಿಸಲಿದ್ದಾರೆ. ಅಥವಾ ರಜನಿ ಮಕ್ಕಳ್ ಮಂಡ್ರಮ್ ಉದ್ದೇಶ ಹಾಗೂ ಭವಿಷ್ಯದ ಬಗ್ಗೆ ತಿಳಿಸಲಿದ್ದಾರೆ ಎಂದು ರಜನಿ ಆಪ್ತ ವಲಯದಿಂದ ತಿಳಿದು ಬಂದಿದೆ.
ಪ್ರಧಾನಿ ಮೋದಿ ಹಾಗೂ ಅವರ ಅನೇಕ ಯೋಜನೆಗಳನ್ನು ಆಗಾಗ ಹೊಗಳುವ ರಜನಿ ಮುಂದಿನ ನಡೆ ಏನು ಎಂಬುದು ಭಾರಿ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ತಮಿಳುನಾಡಿನಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಜನರೆ ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ
2021ರಲ್ಲಿ ತಮಿಳುನಾಡಿನ ಜನರೆ ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ರಜನಿ ಕಾಂತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿ ಅವರ ಪಕ್ಷದ ಹೆಸರು, ಧ್ಯೇಯೋದ್ದೇಶ, ಲಾಂಛನ ಇನ್ನಿತರ ವಿವರಗಳು ಇನ್ನು ಲಭ್ಯವಾಗಿಲ್ಲ.
ತಮಿಳ್ ಅರುವಿ ಮಣಿಯನ್ ಅವರು ರಾಜಕೀಯ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಪಕ್ಷದ ರೂಪುರೇಷೆ, ಉದ್ದೇಶ, ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಣಿಯನ್ ತಂತ್ರಗಾರಿಕೆ ರೂಪಿಸಲಿದ್ದಾರೆ. ರಜನಿ ಪಕ್ಷಕ್ಕೆ ಪಿಎಂಕೆ ಹಾಗೂ ಬಿಜೆಪಿ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯಿದೆ.
ರಜನಿ ಆರೋಗ್ಯದ ಬಗ್ಗೆ ಕೂಡಾ ಕಾಳಜಿ
69 ವರ್ಷ ವಯಸ್ಸಿನ ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. 'ನಾನು ನನ್ನ ಬಗ್ಗೆ ಹೆಚ್ಚು ಯೋಚನೆಪಡುತ್ತಿಲ್ಲ. ಆದರೆ ನನ್ನ ಸುತ್ತಲೂ ಇರುವವರ ಬಗ್ಗೆ ಚಿಂತೆ ಹೊಂದಿದ್ದೇನೆ' ಎಂದು ರಜನಿ ಹೆಸರಲ್ಲಿ ಓಡಾಡುತ್ತಿರುವ ಪತ್ರದ ಬಗ್ಗೆಯೂ ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ.
ಸ್ಟಾರ್ ನಟ ಕಮಲ್ ಹಾಸನ್ ಹೇಳಿಕೆ
"ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಮಕ್ಕಳ್ ನೀತಿ ಮೈಯಂ ಸ್ಥಾಪಿಸಿರುವ ಸ್ಟಾರ್ ನಟ ಕಮಲ್ ಹಾಸನ್ ಹೇಳಿದ್ದರು.
ಜೆ ಜಯಲಲಿತಾ ಅವನತಿಗೆ ಮುನ್ನಡಿ ಬರೆದ ಹೇಳಿಕೆ
ಎಐಎಡಿಎಂಕೆ ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರ ಹೆಸರನ್ನು ಘೋಷಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮುಂದುವರೆಸುವುದಾಗಿ ಅಮಿತ್ ಶಾ ಮುಂದೆ ಪ್ರಕಟಿಸಿದೆ. 1996ರಲ್ಲಿ ರಜನಿಕಾಂತ್ ಒಂದು ಡೈಲಾಗ್ ನಿಂದಾಗಿ ಜೆ ಜಯಲಲಿತಾ ಅವರು ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ದೇವರು ಕೂಡಾ ಈ ಬಾರಿ ಜೆ ಜಯಲಲಿತಾ ಅವರನ್ನು ಕಾಪಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಯಾವುದೇ ಪಕ್ಷಕ್ಕೂ ನೇರವಾಗಿ ಬೆಂಬಲ ವ್ಯಕ್ತಪಡಿಸಿರಲಿಲ್ಲ
ಇತರೆ ಪಕ್ಷಗಳಿಂದ ತಯಾರಿ ಆರಂಭ
ಇನ್ನೊಂದೆಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡುವ ಕುರುಹು ತೋರಿದ ಡಿಎಂಕೆಯ ಸ್ಟಾಲಿನ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ.
ಸದ್ಯ ಹೈದರಾಬಾದ್ ಪಾಲಿಕೆ ಚುನಾವಣೆಯತ್ತ ಗಮನ ಹರಿಸಿರುವ ಬಿಜೆಪಿ ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳನ್ನು ಪಕ್ಷದತ್ತ ಸೆಳೆಯತೊಡಗಿದೆ. ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಸಾಧ್ಯತೆಯಿದೆ. ಹೀಗಾಗಿ, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಜನಿಕಾಂತ್ ತಮ್ಮ ನಿರ್ಧಾರ ಪ್ರಕಟಿಸಬಹುದು.