ಶುಭಶ್ರೀ ದುರಂತ ಕಂಡು ಮರುಗಿದ ಸ್ಟಾರ್ ನಟರಿಂದ ಮಹತ್ವದ ಘೋಷಣೆ
ಚೆನ್ನೈ, ಸೆ. 16: ಯುವ ಸಾಫ್ಟ್ ವೇರ್ ಇಂಜಿನಿಯರ್ ಶುಭಶ್ರೀ ದುರಂತ ಸಾವಿಗೆ ತಮಿಳು ಚಿತ್ರರಂಗದ ಪ್ರಮುಖ ನಟರು ಮರುಗಿದ್ದಾರೆ. ಸ್ಟಾರ್ ನಟರಾದ ವಿಜಯ್, ಸೂರ್ಯ ಅವರು ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದೆ.
ಈ ನಡುವೆ 23 ವರ್ಷ ವಯಸ್ಸಿನ ಶುಭಶ್ರೀ ಸಾವಿನ ನಂತರ ಕಟೌಟ್ ಸಂಸ್ಕೃತಿಗೆ ಬ್ರೇಕ್ ಹಾಕಲು ಸ್ಟಾರ್ ನಟರಾದ ವಿಜಯ್ ಹಾಗೂ ಸೂರ್ಯ ಮುಂದಾಗಿದ್ದಾರೆ. ಈ ಕುರಿತಂತೆ ಇಬ್ಬರು ನಟರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಟೌಟ್, ಹೋರ್ಡಿಂಗ್ ಹಾಕದಂತೆ ಅಭಿಮಾನಿಗಳಿಗೆ ಸೂಚಿಸಿದ್ದಾರೆ.
ಶುಭಶ್ರೀ ಪರಿಚಯ: ಟೆಕ್ಕಿ,Zumba ಡ್ಯಾನ್ಸರ್, ಆಪ್ತರ ಸ್ಟಾರ್
ಶುಭಶ್ರೀ ಸಾವಿಗೆ ಕಾರಣವಾದ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಹೋರ್ಡಿಂಗ್ ಪ್ರಿಂಟ್ ಮಾಡಿದ್ದ ಪ್ರೆಸ್ ಬಂದ್ ಮಾಡಲಾಗಿದೆ. ಪನ್ನೀರ್ ಸೆಲ್ವಂ, ಎಡಪ್ಪಾಡಿ ಪಳನಿಸ್ವಾಮಿ ಅವರಿದ್ದ ಅಕ್ರಮ ಫ್ಲೆಕ್ಸ್ ಎಐಎಡಿಎಂಕೆ ನಾಯಕ ಹಾಗೂ ಆತನ ಕುಟುಂಬಕ್ಕೆ ಶುಭ ಹಾರೈಸಲು ಹಾಕಲಾಗಿತ್ತು, ಆದರೆ, ಇದುವೇ ಶುಭ ಪ್ರಾಣಕ್ಕೆ ಮಾರಕವಾಯಿತು. ಎಐಎಡಿಎಂಕೆ ನಾಯಕ ಹಾಗೂ ಕುಟುಂಬ ಈಗ ನಾಪತ್ತೆಯಾಗಿದೆ.
ಇಳಯದಳಪತಿ ವಿಜಯ್ ಮನವಿ
ಇಳಯದಳಪತಿ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿಜಯ್ ಅವರ ಸಿನಿಮಾ ರಿಲೀಸ್ ಸಂದರ್ಭದಲ್ಲಿ ತಮಿಳುನಾಡಿನ ಹಲವು ಚಿತ್ರಮಂದಿರ ಅತಿ ಎತ್ತರದ ಕಟೌಟ್ ಗಳನ್ನು ಹಾಕಲಾಗುತ್ತದೆ. ಮುಂಬರುವ ಚಿತ್ರ 'ಬಿಗಿಲ್ 'ಗಾಗಿ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಕಟೌಟ್ ಹಾಕದಂತೆ ಫ್ಯಾನ್ಸಿಗೆ ಸೂಚನೆ
ಇನ್ನೊಂದೆಡೆ ನಟ ಸೂರ್ಯ ಕೂಡಾ ತಮ್ಮ ಮುಂಬರುವ ಚಿತ್ರ 'ಕಾಪ್ಪನ್' ಚಿತ್ರಕ್ಕಾಗಿ ಯಾವುದೇ ಕಟೌಟ್ ಹಾಕದಂತೆ ಫ್ಯಾನ್ಸಿಗೆ ಸೂಚಿಸಿದ್ದಾರೆ. ಕಟೌಟ್, ಸ್ಟಾರ್ ಕಟ್ಟುವುದು, ದೊಡ್ಡ ಹೋರ್ಡಿಂಗ್ ಹಾಕಲು ಖರ್ಚು ಮಾಡದೆ, ರಕ್ತದಾನ ಮುಂತಾದ ಉತ್ತಮ ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ಕೋರಿದ್ದಾರೆ.
'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ
ನಟ ಅಜಿತ್ ಕುಮಾರ್ ಫ್ಯಾನ್ಸ್
ಅಜಿತ್ ಕುಮಾರ್ ಅವರ ಫ್ಯಾನ್ಸ್ ಈಗಾಗಲೇ ಬ್ಯಾನರ್, ಬಂಟಿಂಗ್ಸ್, ಹೋರ್ಡಿಂಗ್, ಕಟೌಟ್ ಸಂಸ್ಕೃತಿಗೆ ಬ್ರೇಕ್ ಹಾಕಿದ್ದಾರೆ. 'ನಮ್ಮ ತಂಗಿ ಶುಭಶ್ರೀ ಸಾವಿಗೆ ಬ್ಯಾನರ್ ಕಾರಣವಾಗಿದೆ. ತಮಿಳುನಾಡು ಈಗ ಶೋಕದಲ್ಲಿ ಮುಳುಗಿದೆ. ಇಂಥ ಸಂದರ್ಭದಲ್ಲಿ ನಾವು ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳಬೇಕಿದೆ. ಅಜಿತ್ ಅವರ ಕೋರಿಕೆಯಂತೆ ನಾವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಕ್ರಮವಾಗಿ ಯಾವುದೇ ಹೋರ್ಡಿಂಗ್ಸ್ ಹಾಕಿ ತೊಂದರೆ ಕೊಡುವುದಿಲ್ಲ" ಎಂದು ಅಜಿತ್ ಅವರ ಮಧುರೈ ಫ್ಯಾನ್ಸ್ ಸಂಘ ಪ್ರಕಟಣೆ ಹೊರಡಿಸಿದೆ.
ನಟ ಕಮಲ್ ಹಾಸನ್ ಮನವಿ
ನಟ ಕಮಲ್ ಹಾಸನ್ ಕೂಡಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶುಭಶ್ರೀ ಸಾವಿನ ಬಗ್ಗೆ ಮಾತನಾಡಿ, ಸಾವಿನ ಕಾರಣ ನಿಮಗೆಲ್ಲ ಗೊತ್ತಿದೆ. ನಾವು ನಾಗರೀಕರಾಗಿ ಏನು ಮಾಡಬೇಕೋ ಅದನ್ನು ಮಾಡೋಣ, ಕಾನೂನು ರೀತಿ ಕ್ರಮ ನಡೆಯಲಿದೆ. ಇಂಥ ದುರಂತ ನಡೆಯಬಾರದು ಎಂದಿದ್ದಾರೆ. ಶುಭಶ್ರೀ ಕುಟುಂಬದೊಡನೆ ಕೂಡಾ ಮಾತನಾಡಿ ಸಾಂತ್ವನ ಹೇಳಿದರು.