ತೂತುಕುಡಿಯಲ್ಲಿ ನಿಲ್ಲದ ಗಲಭೆ, ಪೊಲೀಸರ ಗುಂಡಿಗೆ ಮತ್ತೋರ್ವ ಬಲಿ
ತೂತುಕುಡಿ (ತಮಿಳುನಾಡು), ಮೇ 23: ಇಲ್ಲಿ ನಡೆಯುತ್ತಿರುವ ಗಲಭೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಮಂಗಳವಾರ ನಡೆದ ಪೊಲೀಸರು ಮತ್ತು ನಾಗರೀಕರ ಘರ್ಷಣೆಯಲ್ಲಿ 11 ಜನ ಸಾವನ್ನಪ್ಪಿ,65 ಜನ ಗಾಯಗೊಂಡಿದ್ದರು. ಇದೀಗ ಇಂದೂ ಕೂಡ ತೂತುಕುಡಿಯಲ್ಲಿ ಗಲಭೆ ಮುಂದುವರಿದಿದೆ.
ವೇದಾಂತ ಗ್ರೂಪ್ ಗೆ ಸೇರಿದ ಸ್ಟೆರ್ ಲೈಟ್ ತಾಮ್ರದ ಕಂಪನಿ ವಿರುದ್ಧ ಇಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದರು. ಮಂಗಳವಾರ ಪ್ರತಿಭಟನೆಗೆ 100 ದಿನ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗಿತ್ತು. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ 11 ಜನರು ಸಾವನ್ನಪ್ಪಿದ್ದರು.
ಇಂದೂ ಕೂಡ ಪ್ರತಿಭಟನೆ ಮುಂದುವರಿದಿದೆ. ಇಂದಿನ ಪ್ರತಿಭಟನೆ ವೇಳೆ ಅಣ್ಣಾ ನಗರದಲ್ಲಿ ಪೊಲೀಸರು ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆಸಿದೆ. ಈ ವೇಳೆ ಮತ್ತೆ ಪೊಲೀಸರು ಮತ್ತೆ ಗುಂಡು ಹಾರಿಸಿದ್ದಾರೆ.
ಪೊಲೀಸರ ಗುಂಡಿನ ದಾಳಿಗೆ ಮೂರು ಜನರು ಗಾಯಗೊಂಡಿದ್ದಾರೆ. ಮತ್ತೊಬ್ಬರು ಅಸುನೀಗಿದ್ದಾರೆ. ಹೀಗಾಗಿ ತೂತುಕುಡಿ ಗೋಲಿಬಾರ್ ನಲ್ಲಿ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.