ತೂತುಕುಡಿ ಹಿಂಸಾಚಾರ, ಶುಕ್ರವಾರ ತಮಿಳುನಾಡು ಬಂದ್ ಗೆ ಡಿಎಂಕೆ ಕರೆ
ಚೆನ್ನೈ, ಮೇ 24: ತೂತುಕುಡಿಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕರರ ಮಧ್ಯೆ ನಡೆದ ಸಂಘರ್ಷದಲ್ಲಿ 13 ಜನರು ಬಲಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ತಮಿಳುನಾಡು ಬಂದ್ ಗೆ ಡಿಎಂಕೆ ಕರೆ ನೀಡಿದೆ.
ಇಂದು ಕೂಡ ಚೆನ್ನೈನಲ್ಲಿ ರಾಜ್ಯದ ಸಚಿವಾಲಯದ ಮುಂದೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೂತುಕುಡಿಯಲ್ಲಿ ನಿಲ್ಲದ ಗಲಭೆ, ಪೊಲೀಸರ ಗುಂಡಿಗೆ ಮತ್ತೋರ್ವ ಬಲಿ
ಈ ಸಂದರ್ಭ ಮಾತನಾಡಿರುವ ಸ್ಟಾಲಿನ್ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಜಿಪಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
"12 ಜನ ಮುಗ್ಧರು ಸಾವನ್ನಪ್ಪಿಯೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮುಖ್ಯಮಂತ್ರಿ ಕೈಕಟ್ಟಿ ಕುಳಿತಿದ್ದಾರೆ. ಜಿಲ್ಲೆಗೆ ಭೇಟಿ ನೀಡುವ ಬಗ್ಗೆ, ಜನರನ್ನು ಭೇಟಿಯಾಗುವ ಬಗ್ಗೆ ಅವರು ಆಲೋಚಿಸಿಲ್ಲ. ಅದಕ್ಕಾಗಿ ನಾವು ತಕ್ಷಣವೇ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ. ಡಿಜಿಪಿ ರಾಜೇಂದ್ರನ್ ಕೂಡ ರಾಜೀನಾಮೆ ನೀಡಬೇಕು," ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ಇಲ್ಲಿಯವರೆಗೆ ತೂತುಕುಡಿ ಗಲಭೆಯಲ್ಲಿ 13 ಜನರು ಸಾವನ್ನಪ್ಪಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇನ್ನು ನಾಳೆ ಹಮ್ಮಿಕೊಂಡಿರುವ ಪ್ರತಿಭಟನೆ ವೇಳೆ ಸ್ಟೆರ್ಲೈಟ್ ಕಂಪನಿ ಮುಚ್ಚುವಂತೆ ಆಗ್ರಹಿಸಲಾಗುತ್ತದೆ. ಈ ಬಂದ್ ಗೆ ಕಾಂಗ್ರೆಸ್, ದ್ರಾವಿಡರ್ ಕಳಗಂ, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಸಿಪಿಐ, ಸಿಪಿಐ(ಎಂ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ವಿಧುತಲೈ ಚಿರುಥೈಗಳ್ ಕಚ್ಚಿ ಪಕ್ಷಗಳು ಬೆಂಬಲ ನೀಡಿವೆ ಎಂದು ಡಿಎಂಕೆ ಹೇಳಿಕೊಂಡಿದೆ.