ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್
ಚೆನ್ನೈ, ಮಾರ್ಚ್ 17: ಡಿಎಂಕೆ ಪಕ್ಷ ಅಧಿಕಾರಕ್ಕೆ ಮರಳಿದ್ದೇ ಆದರೆ, ಮಾಜಿ ಸಿಎಂ ಜಯಲಲಿತಾ ಅವರ ನಿಗೂಢ ಸಾವಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಇಬ್ಬರಿಗೂ ಸವಾಲು ಹಾಕಿದ್ದಾರೆ.
ಚೆನ್ನೈನ ರೋಯಾಪುರಂನಲ್ಲಿ ಬುಧವಾರ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, "ನಮ್ಮ ನಾಯಕಿ ಜಯಲಲಿತಾ ಅವರ ಸಾವಿನ ಕುರಿತು ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಗಂಭೀರವಾಗಿ ಯಾವುದೇ ಮಾಹಿತಿಯನ್ನು ಕಲೆ ಹಾಕಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಪ್ರಕರಣವನ್ನು ಖಡಾಖಂಡಿತವಾಗಿ ಬಗೆಹರಿಸುತ್ತೇನೆ" ಎಂದು ಪ್ರತಿಜ್ಞೆ ಮಾಡಿದರು.
ಎಬಿಪಿ-ಸಿ ವೋಟರ್ ಸಮೀಕ್ಷೆ: ತಮಿಳುನಾಡಲ್ಲಿ ಸ್ಟಾಲಿನ್ ಸರ್ಕಾರ ಅಧಿಕಾರಕ್ಕೆ
ಈ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಿದ್ದರೆ, ಜಯಲಲಿತಾ ಸಾವಿನ ತನಿಖೆಗಾಗಿ ರಚಿಸಲಾದ ಆಯೋಗವು ಕತ್ತಲೆಯಲ್ಲಿ ಕಳೆದುಹೋಗುತ್ತಿರಲಿಲ್ಲ ಎಂದು ಆರೋಪಿಸಿದರು.
2016ರ ಸೆಪ್ಟೆಂಬರ್ನಲ್ಲಿ ಜಯಲಲಿತಾ ಅವರನ್ನು ಅನಾರೋಗ್ಯದ ಕಾರಣ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 74 ದಿನಗಳ ಬಳಿಕ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಡಿ. 5ರಂದು ಮೃತಪಟ್ಟಿದ್ದರು. ಆದರೆ ಅವರ ಸಾವಿನ ತನಿಖೆಗಾಗಿ ಆಯೋಗ ರಚಿಸಿ ನಾಲ್ಕು ವರ್ಷ ಕಳೆದಿದ್ದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ದೂರಿದರು. ಕಳೆದ ವಾರವಷ್ಟೇ ಪಳನಿಸ್ವಾಮಿ, ಸ್ಟಾಲಿನ್ ಅವರೇ ಜಯಲಲಿತಾ ಅವರ ಸಾವಿಗೆ ಜವಾಬ್ದಾರರು ಎಂದು ಆರೋಪಿಸಿದ್ದರು. ಈ ಆರೋಪ ನಿಜವಾದರೆ ತನ್ನ ವಿರುದ್ಧ ದೂರು ನೀಡುವಂತೆ ಸ್ಟಾಲಿನ್ ಸವಾಲು ಹಾಕಿದ್ದರು.
ಡಿಎಂಕೆ ಪ್ರಣಾಳಿಕೆಯನ್ನೇ ಎಐಎಡಿಎಂಕೆ ನಕಲು ಮಾಡಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹಾಗೂ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು ಪ್ರಮುಖವಾಗಿ ಸೆಣಸಾಟ ನಡೆಸುವ ನಿರೀಕ್ಷೆಯಿದೆ.