ಸಬ್ ಇನ್ಸ್ಪೆಕ್ಟರ್ ಭೀಕರವಾಗಿ ಹತ್ಯೆಗೈದು ಪರಾರಿಯಾದ ಮೇಕೆ ಕಳ್ಳರು
ಪುದುಕೋಟ್ಟೈ, ನವೆಂಬರ್ 21: ತಮಿಳುನಾಡು ಪುದುಕೋಟ್ಟೈ ಜಿಲ್ಲೆಯ ಕೀರನೂರು ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಸಬ್ ಇನ್ಸ್ಪೆಕ್ಟರ್ (SSI) ಭೂಮಿನಾಥನ್ ಹತ್ಯೆಗೈದು ಮೇಕೆ ಕಳ್ಳರು ಪರಾರಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ
ಮೇಕೆ ಕಳ್ಳರನ್ನು ಹಿಡಿಯಲು ತೆರಳಿದ್ದ ಸಬ್ ಇನ್ಸ್ಪೆಕ್ಟರ್ ಭೂಮಿನಾಥನ್ (55 ವರ್ಷ) ಅವರ ಮೇಲೆ ಕಳ್ಳರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಭೂಮಿನಾಥನ್ ಅವರ ತಲೆ ಬುರುಡೆಯನ್ನು ಕೊಚ್ಚಿ ಹಾಕಿದ್ದಾರೆ.
ತಿರುಚಿರಾಪಳ್ಳಿ ಜಿಲ್ಲೆಯ ನವಲ್ ಪಟ್ಟು ಠಾಣೆಯ ಸ್ಪೆಷಲ್ ಸಬ್ ಇನ್ಸ್ಪೆಕ್ಟರ್ ಭೂಮಿನಾಥನ್ ಅವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಕೆ ಕಳ್ಳತನ ಪ್ರಕರಣ ಹೆಚ್ಚಾಗಿದ್ದರಿಂದ ಖುದ್ದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ತಡರಾತ್ರಿ ಕಳ್ಳರನ್ನು ಬೆನ್ನಟ್ಟಿ ಹೋದಾಗ ಪಕ್ಕದ ಪುದುಕೋಟ್ಟೈ ಜಿಲ್ಲೆಗೆ ಪ್ರವೇಶಿಸಿದ್ದರು.
ತಿರುಚಿರಾಪಳ್ಳಿ - ಪುದುಕೋಟ್ಟೈ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೀರನೂರು ಠಾಣಾ ವ್ಯಾಪ್ತಿಯಲ್ಲಿ ಭೂಮಿನಾಥನ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.
ಬೈಕುಗಳಲ್ಲಿ ಬಂದು ಮೇಕೆಗಳನ್ನು ಕದ್ದು ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಭೂಮಿನಾಥನ್ ಅವರು ತಮ್ಮ ಬೈಕ್ ಏರಿ ರಾತ್ರಿ ಇಡಿ ಕಳ್ಳರ ಗ್ಯಾಂಗ್ ಇರುವಿಕೆ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಸ್ಥಳೀಯರಿಂದ ಇನ್ನಷ್ಟು ಮಾಹಿತಿ ಪಡೆದಿದ್ದಾರೆ. ಪೊಲೀಸ್ ಔಟ್ ಪೋಸ್ಟ್ ಬಳಿ ಬೈಕ್ ನಿಲ್ಲಿಸದೆ ಕಳ್ಳರು ತಪ್ಪಿಸಿಕೊಂಡು ಹೋಗಿರುವ ಮಾಹಿತಿಯೂ ಸಿಕ್ಕಿದೆ.
ಅಲ್ಲಿಂದ ಚೇಸಿಂಗ್ ಶುರು ಮಾಡಿದ ಭೂಮಿನಾಥನ್ ಸಿನೀಮಿಯ ರೀತಿಯಲ್ಲಿ ಪುದುಕೋಟ್ಟೈ ಜಿಲ್ಲೆಯ ಕಲಮವಾರು ಗ್ರಾಮದ ಬಳಿ ಬಂದಿದ್ದಾರೆ. ಕೀರನೂರು ಠಾಣೆ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಅಡಗಿದ್ದ ಕಳ್ಳರನ್ನು ಗುರುತಿಸಿದ್ದಾರೆ.
ಕಳ್ಳರ ಪೈಕಿ ಇಬ್ಬರನ್ನು ಬಂಧಿಸಿರುವುದಾಗಿ ಕಂಟ್ರೋಲ್ ರೂಮಿಗೆ ಕರೆ ಮಾಡಿ ಹೆಚ್ಚಿನ ಪೊಲೀಸ್ ಪಡೆಗಾಗಿ ಮಾಹಿತಿ ರವಾನಿಸಿದ್ದಾರೆ. ಆದರೆ, ಕಳ್ಳರ ಪೈಕಿ ಒಬ್ಬ ಹೇಗೋ ತಪ್ಪಿಸಿಕೊಂಡು ತನ್ನ ಬಳಿ ಇದ್ದ ಮಚ್ಚಿನಿಂದ ಭೂಮಿನಾಥನ್ ತಲೆಯನ್ನು ಕೊಚ್ಚಿ ಹಾಕಿದ್ದಾನೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದ ಭೂಮಿನಾಥನ್ ರಸ್ತೆ ಮಧ್ಯೆ ಶವವಾಗಿದ್ದಾರೆ. ಹೆಚ್ಚಿನ ಪೊಲೀಸ್ ಪಡೆ ಘಟನಾ ಸ್ಥಳಕ್ಕೆ ಆಗಮಿಸುವ ವೇಳೆಗೆ ಕಳ್ಳರು ಪರಾರಿಯಾಗಿದ್ದಾರೆ.
ತಿರುಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಿಕರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಭೂಮಿನಾಥನ್ ಅವರಿಗೆ 45 ವರ್ಷ ವಯಸ್ಸಿನ ಪತ್ನಿ, 21 ವರ್ಷ ವಯಸ್ಸಿನ ಓರ್ವ ಪುತ್ರನಿದ್ದಾನೆ.
ತಮಿಳುನಾಡು ಪುದುಕೋಟ್ಟೈ ಜಿಲ್ಲೆಯ ಕೀರನೂರು ಠಾಣೆಯ ಸಬ್ ಸಬ್ ಇನ್ಸ್ಪೆಕ್ಟರ್ ಭೂಮಿನಾಥನ್ ಹತ್ಯೆಗೈದು ಮೇಕೆ ಕಳ್ಳರು ಪರಾರಿ#Tamilnadu #Tamilnadunews #Crimenews #SubInspector pic.twitter.com/bbaMbEoUER
— oneindiakannada (@OneindiaKannada) November 21, 2021
ಘಟನಾ ಸ್ಥಳಕ್ಕೆ ಪುದುಕೋಟೈ ಎಸ್ ಪಿ ನಿಶಾ ಪಾರ್ಥಿಬನ್, ಕೀರನೂರು ಠಾಣಾಧಿಕಾರಿಗಳು, ತಿರುಚ್ಚಿ ನಗರ ಪೊಲೀಸ್ ಆಯುಕ್ತರು ಆಗಮಿಸಿ ಪರಿಶೀಲಿಸಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಭೂಮಿನಾಥನ್ ಶವವನ್ನು ಕಂಡ ಕೀರನೂರು ಗ್ರಾಮಸ್ಥರು ಬೆಚ್ಚಿದ್ದಾರೆ. ಗ್ರಾಮಸ್ಥರಿಗೆ ಧೈರ್ಯ ಹೇಳಿರುವ ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಕಳ್ಳರು ಬರುವುದಕ್ಕೂ ಮುನ್ನ ಹೆದ್ದಾರಿಯ ಸಬ್ ವೇಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರ ಮಾಹಿತಿ ಸಂಗ್ರಹಿಸಿದ್ದಾರೆ.
ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಬೈಕಿನಲ್ಲಿ ಯುವಕರಿಬ್ಬರು ಸಬ್ ವೇಯಲ್ಲಿ ಮಳೆ ನೀರು ತುಂಬಿದ್ದು, ಇಬ್ಬರು ಸಿಲುಕಿಕೊಂಡಿದ್ದು ಕಂಡು ಬಂದಿದೆ. ಇದೇ ಸಬ್ ವೇ ಬಳಿ ಕಳ್ಳರನ್ನು ಭೂಮಿನಾಥನ್ ಹಿಡಿದುಕೊಂಡಿದ್ದಾರೆ. ಆದರೆ, ನಂತರ ಸಬ್ ವೇ ಬಳಿಯೇ ಅವರ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
Recommended Video
ಕೆ ಅಣ್ಣಾಮಲೈ ತೀವ್ರ ಸಂತಾಪ: ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಭೂಮಿನಾಥನ್ ಅವರನ್ನು ಕಳ್ಳರು ಹತ್ಯೆಗೈದಿರುವುದನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ತೀವ್ರ ಸಂತಾಪ ವ್ಯಕ್ತಪಡಿಸಿ, ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಯಾರು ಕೊಡುತ್ತಾರೆ? ಸ್ಟಾಲಿನ್ ಸರ್ಕಾರ 1 ಕೋಟಿ ರು ಪರಿಹಾರವನ್ನು ಭೂಮಿನಾಥನ್ ಕುಟುಂಬಕ್ಕೆ ನೀಡಬೇಕು, ರಾಜ್ಯದ ಒಬ್ಬ ದಕ್ಷ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದಿದ್ದಾರೆ.