ಜಯಲಲಿತಾ ಮೇಡಂ 'ಸ್ಸಾರಿ' ಎಂದ ಶ್ರೀಲಂಕಾ
ಚೆನೈ, ಆ.1 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ಶ್ರೀಲಂಕಾ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ. ಶ್ರೀಲಂಕಾದ ರಕ್ಷಣಾ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಆಗಿರುವ ಪ್ರಮಾದದಿಂದ ಭಾರತದಲ್ಲಿ ಸಂಚಲನ ಉಂಟಾಗಿತ್ತು. ಲಂಕನ್ ವೆಬ್ ತಾಣದಲ್ಲಿ ಜಯಲಲಿತಾ ವಿರುದ್ಧದ ಅವಹೇಳನಕಾರಿ ಲೇಖನ ಪ್ರಕಟವಾಗಿತ್ತು.
ಶ್ರೀಲಂಕಾದ ರಕ್ಷಣಾ ಇಲಾಖೆ ವೆಬ್ ತಾಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಅವರ ಚಿತ್ರಗಳನ್ನು ಪ್ರಕಟಿಸಿ ಹೀಗೆ ಬರೆಯಲಾಗಿತ್ತು: 'ಈ ಹಿಂದೆ ಯುಪಿಎ ಸರ್ಕಾರಕ್ಕೆ ಬರೆಯುತ್ತಿದ್ದಂತೆ ಮೋದಿಗೂ ಪತ್ರ ಬರೆದರೆ ಏನು ನಡೆಯೋದಿಲ್ಲ. ಮೋದಿ ಮೇಲೆ ಪ್ರಭಾವ ಬೀರಬೇಕಾದ್ರೆ ಜಯಲಲಿತಾ ಪ್ರೇಮ ಪತ್ರದ ರೀತಿಯಲ್ಲಿ ಪತ್ರ ಬರಬೇಕಾಗುತ್ತೆ' ಎಂದಿತ್ತು.
ತಮಿಳುನಾಡಿನ ಮೀನುಗಾರರು ಪದೇಪದೇ ಶ್ರೀಲಂಕಾ ಸಾಗರ ಪ್ರದೇಶಕ್ಕೆ ಬಂದು ಅಕ್ರಮ ಮೀನುಗಾರಿಕೆ ನಡೆಸುತ್ತಾರೆ. ಈ ವೇಳೆ ಮೀನುಗಾರರನ್ನು ಬಂಧಿಸಿದರೆ, ಅವರನ್ನು ಬಿಡಿಸುವಂತೆ ಈ ಹಿಂದೆ ಯುಪಿಎ ಸರ್ಕಾರದ ಮೇಲೆ ಜಯಲಲಿತಾ ಒತ್ತಡ ಹೇರುತ್ತಿದ್ದರು.
ಆದರೆ ಈಗ ಮೋದಿ ಸರ್ಕಾರ ಬಂದಿದ್ದು, ಇಂತಹ ಪತ್ರಗಳಿಂದ ಏನೂ ನಡೆಯೋದಿಲ್ಲ. ಈಗ ಮೀನುಗಾರರನ್ನು ಬಿಡಿಸಬೇಕಾದರೆ ಮೋದಿ ಅವರಿಗೆ ಲವ್ ಲೆಟರ್ ರೀತಿಯ ಪತ್ರ ಬರೆಯಬೇಕಾಗುತ್ತದೆಂದು ಜಯಲಲಿತಾ ವಿರುದ್ಧ ಲೇವಡಿ ಮಾಡಲಾಗಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆ ತಮಿಳುನಾಡಿನ ಹಲವೆಡೆ ಪ್ರತಿಭಟನೆಗಳು ನಡೆಯಿತು. ಬಿಜೆಪಿ ಮೈತ್ರಿ ಪಕ್ಷ ಎಂಡಿಎಂಕೆ ಹಾಗೂ ಪಿಎಂಕೆ ಕೂಡಾ ಶ್ರೀಲಂಕಾ ಸರ್ಕಾರದ ವಿರುದ್ಧ ದನಿ ಎತ್ತಿದ್ದವು. ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ಹಾಗೂ ರಕ್ಷಣಾ ಕಾರ್ಯದ್ರ್ಶಿ ಅವರು ಕ್ಷಮೆಯಾಚಿಸದಿದ್ದರೆ ಪಕ್ಷಾತೀತವಾಗಿ ತಮಿಳರು ಬೀದಿಗಿಳಿದು ಹೋರಾಟ ನಡೆಸುವುದಾಗಿ ಪಿಎಂಕೆ ಮುಖ್ಯಸ್ಥ ಎಸ್ ರಾಮದಾಸ್ ಎಚ್ಚರಿಸಿದ್ದರು.
ಆದರೆ, How Meaningful are Jayalalithaa's Love Letters to Narendra Modi' ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ಲೇಖನ ಕ್ಕೂ ಶ್ರೀಲಂಕಾ ರಕ್ಷಣಾ ಇಲಾಖೆಗೂ ಸಂಬಂಧವಿಲ್ಲ ಇದು ಜನರ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಲಾಗಿತ್ತು.ಆದರೆ, ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಶ್ರೀಲಂಕಾ ಸರ್ಕಾರ, ಲೇಖನವನ್ನು ತೆಗೆದು ಹಾಕಿ ಕ್ಷಮೆಯಾಚಿಸಿದೆ.