ಗಾಯಕ ಎಸ್ಪಿಬಿ ಆರೋಗ್ಯ ಕುರಿತಂತೆ ಪುತ್ರ ಚರಣ್ ಸ್ಪಷ್ಟನೆ
ಚೆನ್ನೈ, ಆ. 24: ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕೊವಿಡ್ 19 ವರದಿ ನೆಗಟಿವ್ ಎಂಬ ಸುದ್ದಿಯನ್ನು ಅವರ ಪುತ್ರ ಎಸ್ ಪಿ ಬಿ ಚರಣ್ ಅಲ್ಲಗೆಳೆದಿದ್ದಾರೆ. ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್ಪಿಬಿ ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಚರಣ್ ಸ್ಪಷ್ಟನೆ ನೀಡಿದ್ದಾರೆ.
Recommended Video
"ನಾನು ಆಸ್ಪತ್ರೆಯ ವೈದ್ಯರ ಜೊತೆ ಮಾತನಾಡಿದ ಬಳಿಕ ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಆದರೀಗ ಬೆಳಗ್ಗೆ ಮಾಹಿತಿ ನೀಡುತ್ತಿದ್ದೇನೆ. ಅಪ್ಪನ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಖಚಿತ ಮಾಹಿತಿ ಇಲ್ಲ, ನನ್ನ ಹೆಸರಿನಲ್ಲಿ ಈ ಬಗ್ಗೆ ಹರಡಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಎಸ್ ಪಿ ಬಿ ಇನ್ನೂ ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದಾರೆ'' ಎಂದಿದ್ದಾರೆ.
ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕೊವಿಡ್ 19 ಸೋಂಕು ಮುಕ್ತ
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟ ತೊಂದರೆಯಾಗಿದ್ದರಿಂದ ಎಸ್ಪಿಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೊವಿಡ್ 19 ಲಕ್ಷಣಗಳಿರುವುದು ದೃಢಪಟ್ಟಿತ್ತು.
ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
16ಕ್ಕೂ ಅಧಿಕ ಭಾಷೆಯಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಡಿಯೋ ಸಂದೇಶ ನೀಡಿ, ಕೋವಿಡ್ 19 ಸೋಂಕಿನ ಸಣ್ಣ ಪ್ರಮಾಣದ ಲಕ್ಷಣ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದರು.
ಇದಾದ ಬಳಿಕ ಅವರ ಶ್ವಾಸಕೋಶದ ಸೋಂಕು ಉಲ್ಬಣಿಸಿ, ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿತ್ತು. ಕೊವಿಡ್ 19 ಕೂಡಾ ನೆಗಟಿವ್ ಎಂದು ಬಂದಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಆಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಪ್ರಾರ್ಥನೆ ಫಲಿಸಿತು ಎಂಬ ಖುಷಿಯಲ್ಲಿದ್ದರು. ಆದರೆ, ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ತಿಳಿದು ಬಂದಿದೆ.