ಹಿಂದಿ ಅಥವಾ ಇಂಗ್ಲಿಷ್ನಲ್ಲಿಯೇ ಮಾತಾಡಿ: ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ
ಚೆನ್ನೈ, ಜೂನ್ 14: ಕೇವಲ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಸಂವಹನ ನಡೆಸುವಂತೆ ಹೊರಡಿಸಿದ್ದ ಆದೇಶಕ್ಕೆ ವಿರುದ್ಧ ತೀವ್ರ ಪ್ರತಿಭಟನೆಗಳು ವ್ಯಕ್ತವಾದ ಬಳಿಕ ದಕ್ಷಿಣ ರೈಲ್ವೆ ಅಧಿಕಾರಿಗಳು ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಹಿಂದಿ ಹೇರಿಕೆ: ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ ಸ್ಟಾಲಿನ್
ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತ್ರ ಸಂವಹನ ನಡೆಸಬೇಕು. ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಬಾರದು ಎಂದು ದಕ್ಷಿಣ ರೈಲ್ವೆ ಜೂನ್ 12ರಂದು ವಿಭಾಗೀಯ ನಿಯಂತ್ರಣ ಕಚೇರಿ ಮತ್ತು ಸ್ಟೇಷನ್ ಮಾಸ್ಟರ್ಗಳಿಗೆ ಸೂಚಿಸಿ ವಿವಾದಾತ್ಮಕ ಸುತ್ತೋಲೆ ಹೊರಡಿಸಿತ್ತು.
ನಿಯಂತ್ರಣ ಕೊಠಡಿ ಮತ್ತು ಸ್ಟೇಷನ್ ಮಾಸ್ಟರ್ ನಡುವಿನ ಸಂವಹನ ಈ ಎರಡು ಭಾಷೆಗಳಲ್ಲಿ ಮಾತ್ರ ಇರಬೇಕು. ಇಲಾಖೆಯಲ್ಲಿ ಸ್ಥಳೀಯ ಭಾಷೆ ಬಾರದ ಸಿಬ್ಬಂದಿ ಇರುವುದರಿಂದ ಸಂವಹನದ ಸಮಸ್ಯೆ ಎದುರಾಗುವುದನ್ನು ತಡೆಯಲು ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಹಿಂದಿ ಹೇರಿಕೆ ಆರೋಪ: ಆಕ್ರೋಶಕ್ಕೆ ತಲೆಬಾಗಿದ ಕೇಂದ್ರ ಸರ್ಕಾರ
ಇದರ ವಿರುದ್ಧ ತಮಿಳುನಾಡಿನ ರಾಜಕೀಯ ಪಕ್ಷಗಳು ಹಾಗೂ ಅಖಿಲ ಭಾರತ ರೈಲ್ವೆ ವ್ಯಕ್ತಿಗಳ ಸಂಸ್ಥೆ (ಎಐಆರ್ಎಫ್) ವ್ಯಾಪಕ ಪ್ರತಿಭಟನೆ ನಡೆಸಿದ್ದವು.
ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ದ್ರಾವಿಡರ್ ಕಳಗಂ ಮುಖಂಡ ವಿ. ವೀರಮಣಿ, ಪಿಎಂಕೆ ಸಂಸ್ಥಾಪಕ ಎಸ್ ರಾಮದಾಸ್, ಎಂಡಿಎಂಕೆ ಮುಖಂಡ ವೈಕೋ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಈ ನಿರ್ಧಾರವನ್ನು ಟೀಕಿಸಿದ್ದರು.