ಸೇತುವೆ ಮೇಲಿಂದ ಶವ ಕೆಳಗಿಳಿಸಿದ್ರು, ಘಟನೆ ಹಿಂದಿದೆ ಮನಕಲಕುವ ಕತೆ
ಚೆನ್ನೈ, ಆಗಸ್ಟ್ 23: ಐದಾರು ಮಂದಿ ಸೇತುವೆ ಮೇಲಿದ್ದಾರೆ, ಕೆಲವು ಮಂದಿ ಸೇತುವೆ ಕೆಳಗಿದ್ದಾರೆ, ಶವವನ್ನು ಹಗ್ಗಕ್ಕೆ ಕಟ್ಟಿ ಸೇತುವೆ ಮೇಲಿಂದ ಕೆಳಗಿಳಿಸಿದ್ದಾರೆ.
ಹಾಗೆಂದ ಮಾತ್ರಕ್ಕೆ ಸೇತುವೆ ಮೇಲೆ ಯಾವ ಟ್ರಾಫಿಕ್ ಜಾಮ್ ಆಗಿಲ್ಲ, ಅಥವಾ ಸೇತುವೆಯಿಂದ ಶವವನ್ನು ಹೀಗೆ ಕೆಳಗಿಳಿಸುವುದು ಯಾವ ಸಂಪ್ರದಾಯವೂ ಅಲ್ಲ.
ಪತಿಯ ಶವ ತೆಗೆದುಕೊಂಡು ಮೊದಲು ಬಸ್ಸಿನಿಂದ ಕೆಳಗಿಳಿ ಎಂದಿದ್ರು
ಆದರೆ ಇನ್ನು ಮೇಲ್ಜಾತಿ, ಕೆಳಜಾತಿ ಎಂಬ ಜಾತಿಯ ಭೂತ ಬುದ್ಧಿಗಂಟಿಕೊಂಡೇ ಇರುವ ಕಾರಣ ಕಾರಣ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದೆ.
ಮೇಲ್ವರ್ಗದ ಸಮುದಾಯದವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ದಾರಿ ನೀಡದ ಕಾರಣ ದಲಿತರು ಸೇತುವೆ ಮೇಲಿನಿಂದ ಹಗ್ಗ ಕಟ್ಟಿ ಶವ ಇಳಿಸಿದ್ದಾರೆ.
ಈ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವನಿಯಂಬಾಡಿ ತಾಲೂಕಿನಲ್ಲಿ ನಡೆದಿದೆ.ಶವವನ್ನು ಸೇತುವೆ ಮೇಲಿಂದ ಕೆಳಗಿಳಿಸುವ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು.
46 ವರ್ಷದ ಎಸ್.ಕುಪ್ಪಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಾಗಿ ಶವವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ದಾರಿ ಮಧ್ಯದಲ್ಲಿ ಆತ ಕೆಳ ಜಾತಿಯವನು ಎನ್ನುವ ಒಂದೇ ಒಂದು ಕಾರಣಕ್ಕೆ ಶವವನ್ನು ಸಾಗಿಸಲು ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಸೇತುವೆಯಿಂದ ಕೆಳಗಿಳಿಸಿ ಬಳಿಕ ಅಲ್ಲಿಂದ ಶವ ಸಾಗಿಸಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಲೇಬೇಕಾಗಿತ್ತು.