ಚೆನ್ನೈ ಕಡಲ ಕಿನಾರೆಯಲ್ಲಿ ಫಳಫಳಿಸುವ ನೀಲಿ ಕಿರಣ; ಎಚ್ಚರಿಕೆ ಎಂದ ಸಂಶೋಧಕರು
ಚೆನ್ನೈ, ಆಗಸ್ಟ್ 19: ಸಾಗರದ ಅಲೆಗಳು ನೀಲಿ ದೀಪದಿಂದ ಫಳಫಳಿಸುತ್ತಾ ಕಣ್ಣು ಕೋರೈಸುತ್ತಿದ್ದರೆ ವಾಹ್ ಎಂಥ ಸೌಂದರ್ಯ ಎಂದುಕೊಳ್ಳುತ್ತೀರಾ ಅಲ್ಲವಾ? ಅದು ಕೂಡ ಯಾವುದೇ ಸಿನಿಮಾ ಸೆಟ್ ಅಲ್ಲ. ಪ್ರಾಕೃತಿಕವಾಗಿಯೇ ಸಾಗರವು ನೀಲಿ ಬಣ್ಣದ ದೀಪ ಹಾಕಿದಂತೆ ಕಾಣಿಸಿಕೊಂಡಿದ್ದು, ಇಂಥ 'ಐತಿಹಾಸಿಕ ಘಟನೆ' ಕಂಡ ಹಲವರು ಅದರ ಫೋಟೋಗಳು, ವಿಡಿಯೋಗಳನ್ನು ಭಾನುವಾರ ಚೆನ್ನೈನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೆನ್ನೈನಲ್ಲಿ ಹೀಗೆ ಸಾಗರದ ಅಲೆಗಳನ್ನು ಕಂಡು ಜನರು ಸಂಭ್ರಮದಿಂದ ಬೀಗುತ್ತಿದ್ದಾರೆ. ಆದರೆ ವಿಜ್ಞಾನಿಗಳು, ಪರಿಸರವಾದಿಗಳು ಹೇಳುವ ಪ್ರಕಾರ: ಸಾಗರದಲ್ಲಿ ಎಲ್ಲವೂ ಸರಿಯಿಲ್ಲ.
ಇದೇನಿದು ಸೂರ್ಯನ ಸುತ್ತ ವಿಸ್ಮಯಕಾರಿ ಉಂಗುರ?
ನೀಲಿ ಬಣ್ಣದಲ್ಲಿ ಫಳಫಳಿಸುವ ಸಾಗರದ ಅಲೆಗಳ ಫೋಟೋಗಳು ಇಂಟರ್ ನೆಟ್ ನಲ್ಲಿ, ಅದರಲ್ಲೂ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂದಹಾಗೆ ಈ ನೀಲಿ ಬಣ್ಣದ ಕಿರಣಗಳನ್ನು ಕೋವಲಂನಿಂದ ತಿರುವನ್ ಮೈಯೂರ್ ತನಕ ಕಡಲ ತೀರದಲ್ಲಿ ಭಾನುವಾರ ಸಂಜೆ ಈ ನೀಲಿ ಕಿರಣಗಳು ಕಂಡಿವೆ. ಆದರೆ ಇದರ ಪರಿಣಾಮ ಎಲಿಯಟ್ ಹಾಗೂ ಮರೀನಾ ಕಡಲ ಕಿನಾರೆಯಲ್ಲಿ ಕಡಿಮೆ ಇತ್ತು.
ಅಮೆರಿಕದಂಥ ದೇಶವೂ ಸೇರಿ ಹಲವು ದೇಶಗಳಲ್ಲಿ ಈ ರೀತಿ ನೀಲಿ ಬಣ್ಣದಲ್ಲಿ ನೀರು ಫಳಫಳಿಸುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಭಾರತದ ಕಡಲ ಕಿನಾರೆಯಲ್ಲಿ ಕಾಣಿಸಿಕೊಂಡಿದೆ.
ಸಂಶೋಧಕರಾದ ಪೂಜಾ ಕುಮಾರ್ ಎಂಬುವವರು ವಿವರಿಸುವ ಪ್ರಕಾರ: ಅನಾರೋಗ್ಯದಿಂದ ಇರುವ ಸಾಗರದ ಲಕ್ಷಣ ಕೂಡ ಆಗಿರಬಹುದು ಎಂದು ನೆನಪಿಡಬೇಕು. ಎಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೋ ಅಂಥಲ್ಲಿ ಹೀಗೆ ಕಾಣಿಸುತ್ತದೆ. ಅದರ ಜತೆಗೆ ನೈಟ್ರೋಜನ್, ರಂಜಕ ಮುಂತಾದವು ಹೆಚ್ಚಳವಾಗಿದೆ ಎಂಬುದರ ಸಂಕೇತ ಇದು. ಇದು ಸಾಮಾನ್ಯವಾಗಿ ಸಾಗರದ ಆಹಾರವನ್ನೇ ನೆಚ್ಚಿಕೊಂಡಿರುವ ದೊಡ್ಡ ಮಟ್ಟದ ಜೀವಿಗಳಿಗೆ ಕೆಟ್ಟ ಸುದ್ದಿ ಎಂದಿದ್ದಾರೆ.
ಭಾರೀ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿರುವುದಕ್ಕೂ ಇದು ತಳಕು ಹಾಕಿಕೊಂಡಿರಬಹುದು. ಜತೆಗೆ ಅಮೋನಿಯಾ ಬಿಡುಗಡೆ ಮತ್ತು ಕೆಲವೆಡೆ ಮೀನುಗಾರಿಕೆ ಕಡಿಮೆ ಆಗಿರುವುದು ಕಾರಣ ಇರಬಹುದು ಎಂದು ಅವರು ವಿವರಿಸುತ್ತಾರೆ. ಇನ್ನೂ ಕೆಲ ಸಂಶೋಧಕರ ಪ್ರಕಾರ, ಈ ನೀಲಿ ಕಿರಣಗಳು ಮೀನುಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಮುಂದಿನ ವಾರಗಳು ಅಥವಾ ತಿಂಗಳುಗಳಲ್ಲಿ ಕಾದು ನೋಡಬೇಕು.
ಪೂಜಾ ಕುಮಾರ್ ಇದಕ್ಕಾಗಿ ಹೇಳುವ ಮತ್ತೊಂದು ಕಾರಣ ಏನೆಂದರೆ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಸಾಗರವು ಕಾವೇರುತ್ತಿದೆ.