ಪಟಾಕಿ ಘಟಕದ ಭಾರೀ ದುರಂತದಲ್ಲಿ ಆರು ಕಾರ್ಮಿಕರು ಸಾವು, ಕುಸಿದ ಕಟ್ಟಡ
ತಿರುವಾರೂರ್ (ತಮಿಳುನಾಡು), ಮಾರ್ಚ್ 27: ಇಲ್ಲಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿರುವ ಮನ್ನಾರ್ ಗುಡಿಯಲ್ಲಿನ ಪಟಾಕಿ ತಯಾರಿಕೆ ಘಟಕದಲ್ಲಿ ಬುಧವಾರ ಸ್ಫೋಟ ಸಂಭವಿಸಿ, ಆರು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಹಾಗೂ ಪರಿಹಾರ ಕಾರ್ಯಾಚರಣೆ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಟಾಕಿ ತಯಾರಿಸಲು ಕಚ್ಚಾ ವಸ್ತುಗಳನ್ನು ಕಾರ್ಮಿಕರು ಸಿದ್ಧ ಮಾಡಿಕೊಳ್ಳುವಾಗ ಈ ಘಟನೆ ಸಂಭವಿಸಿದೆ. ಈ ಪಟಾಕಿ ಘಟಕದ ಮಾಲೀಕ ಕೂಡ ಸಾವನ್ನಪ್ಪಿದ್ದಾರೆ. ಈ ಸ್ಫೋಟ ಅದ್ಯಾವ ಪ್ರಮಾಣದಲ್ಲಿ ಪ್ರಬಲವಾಗಿತ್ತು ಅಂದರೆ ಘಟಕ ಇದ್ದ ಕಟ್ಟಡದ ಒಂದು ಭಾಗವೇ ಕುಸಿದುಹೋಗಿದೆ. ಕೆಲ ಭಾಗ ನೆಲ ಕಚ್ಚಿದೆ.
ಪಕ್ಕದ ತಮಿಳುನಾಡು ರಾಜ್ಯದ ಸಂಸದರ ಶೈಕ್ಷಣಿಕ ವಿವರ
ಅಗ್ನಿಶಾಮಕ ದಳದ ಸಿಬ್ಬಂದಿ, ಪರಿಹಾರ ಕಾರ್ಯಾಚರಣೆ ತಂಡಗಳು ಸ್ಥಳಕ್ಕೆ ಧಾವಿಸಿವೆ. ತುಂಬ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ. ಈ ಘಟಕ ನಡೆಸಲು ಪರವಾನಗಿ ಇತ್ತು ಎಂದು ಅಧಿಕಾರಿಗಳು ಹೇಳುತ್ತಿದ್ದು, ಸ್ಥಳೀಯ ಕಾರ್ಯಕ್ರಮವೊಂದಕ್ಕಾಗಿ ಪಟಾಕಿ ತಯಾರಿಕೆಯಲ್ಲಿ ನಿರತರಾಗಿದ್ದರು ಎನ್ನಲಾಗುತ್ತಿದೆ.
6 ಕಾರ್ಮಿಕರ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸಂತಾಪ ಸೂಚಿಸಿದ್ದಾರೆ. ಅಹಾರ ಸಚಿವ ಆರ್.ಕಾಮರಾಜ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.