ಜಲ್ಲಿಕಟ್ಟು : 7 ಜನರ ಬದುಕಿನ ಆಟ ನಿಲ್ಲಿಸಿದ ಕರಾಳ ಭಾನುವಾರ
ತಮಿಳುನಾಡಿನ ವಿವಿಧೆಡೆ ಭಾನುವಾರ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಆಯೋಜಕರು ಸರಿಯಾದ ನಿಯಮಗಳನ್ನು ಪಾಲಿಸದೆ ಅನಾಹುತ ಸಂಭವಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ
ಚೆನ್ನೈ, ಫೆಬ್ರವರಿ 13: ತಮಿಳುನಾಡಿನ ವಿವಿಧೆಡೆ ಭಾನುವಾರ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕೃಷ್ಣಗಿರಿ ಜಿಲ್ಲೆಯಲ್ಲಿ ಮೂವರು ಪ್ರೇಕ್ಷಕರು ಮೃತಪಟ್ಟಿದ್ದರೆ, ವೆಲ್ಲೂರು ಜಿಲ್ಲೆಯಲ್ಲಿ ಇಬ್ಬರು, ಮದುರೈ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕೃಷ್ಣಗಿರಿಯಲ್ಲಿ ಹೋರಿ ಕೆಳಗೆ ಬೀಳಿಸಿ ಇಬ್ಬರು ಮೃತಪಟ್ಟಿದ್ದರೆ, ಒಬ್ಬ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದ್ದ. ಗುಂಪಿನಲ್ಲಿ ಹೋರಿಯನ್ನು ತಡೆಯುವ ಯತ್ನದಲ್ಲಿದ್ದಾಗ ಕೆಳಗೆ ಬಿದ್ದ ಆತ ಉಸಿರುಗಟ್ಟಿ ಸತ್ತಿದ್ದಾನೆ. ಇನ್ನು ಅರವತ್ತು ವರ್ಷದ ವ್ಯಕ್ತಿಯೊಬ್ಬರನ್ನು ಹೋರಿ ಕೆಳಗೆ ಬೀಳಿಸಿದ್ದರಿಂದ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.[ಜಲ್ಲಿಕಟ್ಟಿನಿಂದ ನಾವು ಕಲಿತಿದ್ದೇನು? ರವಿಶಂಕರ್ ಗುರೂಜಿ ಬರೆಯುತ್ತಾರೆ]
ವೆಲ್ಲೂರಿನ ಬರಗೂರಿನಲ್ಲಿ 34 ವರ್ಷದ ವ್ಯಕ್ತಿಯೊಬ್ಬರ ಕಾಲು ಹಗ್ಗಕ್ಕೆ ಸಿಕ್ಕಿಹಾಕಿಕೊಂಡು, ಹೋರಿ ಕೆಳಗೆ ಬೀಳಿಸಿದೆ. ಅವರಿಗೂ ತಲೆಗೆ ಗಂಭೀರ ಗಾಯವಾಗಿ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಆಯೋಜಕರು ಆಟದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.[ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ನಕಾರ]
ಕ್ರೀಡೆ ನಡೆಯುವ ವೇಳೆ ಬ್ಯಾರಿಕೇಡ್ ಇರಲಿಲ್ಲ. ಪ್ರೇಕ್ಷಕರು ಹಾಗೂ ಹೋರಿಗಳ ಮಧ್ಯೆ ಅಂತರ ಇರುವಂತೆ ವ್ಯವಸ್ಥೆ ಮಾಡಿರಲಿಲ್ಲ ಎಂದು ವರದಿಯಾಗಿದೆ. ಈ ಮಧ್ಯೆ ಹತ್ತೊಂಬತ್ತು ವರ್ಷದ ಶರತ್ ಕುಮಾರ್ ಶಿವಗಂಗಾ ಜಿಲ್ಲೆಯಲ್ಲಿ ಹಾಗೂ 52 ವರ್ಷದ ಆಂಥೋನಿಸ್ವಾಮಿ ತೂತುಕುಡಿಯಲ್ಲಿ ಹೋರಿ ತಿವಿದು ಸಾವನ್ನಪ್ಪಿದ್ದಾರೆ.