ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ನಕಾರ
ತಮಿಳುನಾಡು ಸರಕಾರದ ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ. ಆದರೆ ಮಸೂದೆ ಜಾರಿಗೆ ತಂದಿದ್ದು ಯಾಕೆ ಎಂದು ಪ್ರಶ್ನಿಸಿರುವ ಕೋರ್ಟ್ ಉತ್ತರಿಸಲು ಆರು ವಾರಗಳ ಕಾಲಾವಕಾಶ ನೀಡಿದೆ.
ದೆಹಲಿ, ಜನವರಿ 31: ತಮಿಳುನಾಡಿನ ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಆದರೆ ಮಸೂದೆ ಜಾರಿಗೆ ತಂದಿದ್ದು ಯಾಕೆ ಎಂದು ಪ್ರಶ್ನಿಸಿರುವ ಕೋರ್ಟ್ ಉತ್ತರಿಸಲು ಆರು ವಾರಗಳ ಕಾಲಾವಕಾಶ ನೀಡಿದೆ.
ಜಲ್ಲಿಕಟ್ಟು ನಡೆಸಲು ಅನುಮತಿ ನೀಡಿದ್ದ ತಮಿಳುನಾಡು ಸರಕಾರದ ಮಸೂದೆಯನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿಲ್ಲ ಎಂದು ಹೇಳಿದೆ.[Oneindia explainer: ಜಲ್ಲಿಕಟ್ಟು ಏನು, ಎತ್ತ? ಸ್ವಾರಸ್ಯಕರ ಸಂಗತಿ!]
ದೀಪಕ್ ಮಿಶ್ರಾ ನೇತೃತ್ವದ ವಿಭಾಗಿಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಈ ರೀತಿ ಹಿಂಸಾಚಾರ ನಡೆಯಬಾರದು ಎಂಬುದಾಗಿನ್ಯಾಯ ಪೀಠ ಹೇಳಿದೆ. ಜಲ್ಲಿಕಟ್ಟನ್ನು ಕಾನೂನಾತ್ಮಕಗೊಳಿಸಲು ಮಸೂದೆ ತಂದಿದ್ದೇಕೆ ಎಂದು ಪೀಠ ತಮಿಳುನಾಡು ಸರಕಾರವನ್ನು ಪ್ರಶ್ನಿಸಿದೆ. ಮಾತ್ರವಲ್ಲ ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದೇಕೆ ಎಂದೂ ಪ್ರಶ್ನೆ ಮಾಡಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂಬುದು ಒಂದು ವಿಚಾರ. ಸುಪ್ರಿಂ ಕೋರ್ಟ್ ಗೆ ನಿಂದನೆ ಮಾಡುವುದು ಇನ್ನೊಂದು ವಿಚಾರ . ಎರಡೂ ಬೇರೆ ಬೇರೆ ಎಂದು ಸುಪ್ರಿಂ ಕೋರ್ಟ್ ಈ ಸಂದರ್ಭ ಸ್ಪಷ್ಟಪಡಿಸಿದೆ.[ಜಲ್ಲಿಕಟ್ಟು: ಮಧ್ಯಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್ ನಕಾರ]
ಇನ್ನೊಂದು ಕಡೆಯಲ್ಲಿ ಕೇಂದ್ರ ಸರಕಾರ 2016ರ ಜನವರಿಯಲ್ಲಿ ಜಲ್ಲಿಕಟ್ಟನ್ನು ಕಾನೂನಾತ್ಮಕಗೊಳಿಸಿರುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನು ಕೋರ್ಟ್ ಕೇಂದ್ರಕ್ಕೆ ನೀಡಿದೆ. ಕೇಂದ್ರ ಸರಕಾರ ಹೊರಡಿಸಿದ ಈ ಅಧಿಸೂಚನೆಗೆ ಈ ಹಿಂದೆ ಸುಪ್ರಿಂ ಕೋರ್ಟ್ ತಡೆ ನೀಡಿತ್ತು.