"ಎಐಎಡಿಎಂಕೆ ಮೇಲೆ ಶಶಿಕಲಾಗೆ ಹಕ್ಕಿದೆ; ಅವರು ಧ್ವಜ ಬಳಸಿದರೆ ತಪ್ಪೇನು"
ಚೆನ್ನೈ, ಫೆಬ್ರುವರಿ 08: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಈಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಅಮ್ಮ ಮಕ್ಕಳ ಮುನ್ನೇತ್ರ ಕಳಗಂ ಪಾರ್ಟಿ ಅಧ್ಯಕ್ಷೆ ಶಶಿಕಲಾ ನಟರಾಜನ್ ಸೋಮವಾರ ಬೆಳಿಗ್ಗೆ ತಮಿಳುನಾಡಿಗೆ ಮರಳಿದ್ದಾರೆ.
ಎಐಎಡಿಎಂಕೆ ಧ್ವಜ ಬಳಕೆ ಸಂಬಂಧ ತಮಿಳುನಾಡು ಪೊಲೀಸರ ಎಚ್ಚರಿಕೆ ನಡುವೆಯೂ ಸೋಮವಾರ ತಮ್ಮ ಕಾರುಗಳ ಮೇಲೆ ಮತ್ತೆ ಪಕ್ಷದ ಧ್ವಜ ಬಳಸಿ ತಮಿಳು ನಾಡಿನೆಡೆಗೆ ಹೊರಟಿದ್ದಾರೆ.
ತವರು ರಾಜ್ಯಕ್ಕೆ ಎಂಟ್ರಿ ಕೊಡುತ್ತಿರುವ ಶಶಿಕಲಾಗೆ ಭರ್ಜರಿ ಸ್ವಾಗತ !
ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್, "ಶಶಿಕಲಾ ಎಐಎಡಿಎಂಕೆ ಕಾರ್ಯದರ್ಶಿ. ಅವರು ಪಕ್ಷದ ಧ್ವಜವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಷಯ ನ್ಯಾಯಾಲಯದಲ್ಲಿ ಇನ್ನೂ ಬಾಕಿಯಿದೆ. ಅವರಿಗೆ ಅಧಿಕಾರವಿದೆ, ಅವರು ಯಾವ ಆದೇಶವನ್ನಾದರೂ ಕೊಡಲಿ. ಶಶಿಕಲಾ ಅವರಿಗೆ ಎಐಎಡಿಎಂಕೆ ಪಕ್ಷದ ಮೇಲೆ ಹಕ್ಕಿದೆ" ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿಗೆ ಹೊರಟ ಶಶಿಕಲಾ ಕಾರು ಹಾಗೂ ಅವರಿಗೆ ಸಂಬಂಧಿಸಿದ ಎಲ್ಲಾ ಬೆಂಗಾವಲು ವಾಹನಗಳ ಮೇಲೂ ಎಐಎಡಿಎಂಕೆ ಧ್ವಜಗಳನ್ನು ಹಾರಿಸಲಾಗಿತ್ತು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ನಟರಾಜನ್, ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜನವರಿ 27 ರಂದು ಜೈಲಿನಿಂದ ಬಿಡುಗಡೆಯಾಗಿ ಕೊರೊನಾ ಕಾರಣದಿಂದ ಜನವರಿ 29 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆ ಬಳಿಕ ಆಪ್ತ ಜ್ಯೋತಿಷಿ ಸಲಹೆ ಮೇರೆಗೆ ಫೆಬ್ರವರಿ. 7 ರವರೆಗೆ ಅವರು ಬೆಂಗಳೂರಿನಲ್ಲಿಯೇ ತಂಗಿದ್ದರು. ಸೋಮವಾರ ತಮಿಳುನಾಡಿಗೆ ಮರಳಿದ್ದಾರೆ. ಶಶಿಕಲಾ ಭೇಟಿ ನೀಡುತ್ತಿರುವ ಸಲುವಾಗಿ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಬಿಗಿ ಭದ್ರತೆಯನ್ನೂ ಆಯೋಜಿಸಲಾಗಿತ್ತು.