ಸೆರೆವಾಸ ಮುಗಿಸಿ ತಮಿಳುನಾಡಿಗೆ ಮರಳಿದ ಶಶಿಕಲಾ ಹೇಳಿದ್ದೇನು?
ತಿರುಪತೂರು,ಫೆಬ್ರವರಿ 09: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಶಿಕಲಾ ನಾಲ್ಕು ವರ್ಷಗಳ ಬಳಿಕ ಬಿಡುಗಡೆಯಾಗಿ ತಮಿಳುನಾಡಿಗೆ ಮರಳಿದ್ದಾರೆ.
ಇದೀಗ ಅವರ ಮುಂದಿನ ನಡೆ ಕುರಿತು ಸ್ಪಷ್ಟಪಡಿಸಿದ್ದು, ಸಕ್ರಿಯ ರಾಜಕಾರಣಕ್ಕೆ ಮರಳುವ ಕುರಿತು ಮಾಹಿತಿ ನೀಡಿದ್ದಾರೆ.ನಾನು ಎಂದಿಗೂ ದಬ್ಬಾಳಿಕೆಗೆ ಒಳಗಾಗಿ ಗುಲಾಮಳಾಗುವುದಿಲ್ಲ. ಸಕ್ರಿಯ ರಾಜಕೀಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಿಡಿಮೇಕಿಂಗ್ ನಿಂದ ಹಿಡಿದು ಸಿಎಂ ಪಟ್ಟದ ವರೆಗೆ: ತಮಿಳುನಾಡಿನ ಅಮ್ಮ ಆಗ್ತಾರಾ ಚಿನ್ನಮ್ಮ?
ಶಶಿಕಲಾ ಜೊತೆ ಜೈಲು ಸೇರಿದ್ದ ಅವರ ಆಪ್ತೆ ಇಳವರಸಿ ಮತ್ತು ಸಂಬಂಧಿ ಟಿ.ಟಿ ದಿನಕರನ್ ಕೂಡ ಜೈಲಿನಿಂದ ರಿಲೀಸ್ ಆಗಿದ್ದು, ಅವರು ಕೂಡ ಶಶಿಕಲಾ ಅವರೊಂದಿಗೆ ಚೆನ್ನೈಗೆ ತೆರಳಿದ್ದಾರೆ.
ತಮಿಳುನಾಡು ಜನರಿಗೆ ನಾನು ಋಣಿ
ಜೈಲಿನಿಂದ ಬಿಡುಗಡೆಯಾಗಿ,ಕೋವಿಡ್ -19ಗೆ ಚಿಕಿತ್ಸೆ ಪಡೆದ ಬೆಂಗಳೂರಿನಿಂದ ತಮಿಳುನಾಡು ತಲುಪಿದ ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ನಾನು ತಮಿಳುನಾಡಿನ ಜನರಿಗೆ ಋಣಿಯಾಗಿದ್ದೇನೆ. ಆದರೆ ದಬ್ಬಾಳಿಕೆಯಿಂದ ನಾನು ಹತಾಶಳಾಗುವುದಿಲ್ಲ ಎಂದಿದ್ದಾರೆ.
ಸಕ್ರಿಯ ರಾಜಕಾರಣದಲ್ಲಿರುತ್ತೇನೆ
ನಾನು ಪಕ್ಷದ ಕಾರ್ಯಕರ್ತರಿಗಾಗಿ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ತಮಿಳು ನೀತಿ ಮತ್ತು ನಾನು ಕೈಗೊಂಡ ತತ್ವಗಳಿಗೆ ಬದ್ಧನಾಗಿರುತ್ತೇನೆ. ಆದರೆ ದಬ್ಬಾಳಿಕೆಯಿಂದ ನಾನು ಎಂದಿಗೂ ಗುಲಾಮಳಾಗಲು ಸಾಧ್ಯವಿಲ್ಲ" ಎಂದು ತಮ್ಮ ನಿಷ್ಠಾವಂತರಿಗೆ ಶಶಿಕಲಾ ತಿಳಿಸಿದ್ದಾರೆ.
ಶಶಿಕಲಾಗೆ ತಮಿಳುನಾಡಿನಲ್ಲಿ ಅದ್ಧೂರಿ ಸ್ವಾಗತ
ಬೆಳಗ್ಗೆ 7.30ಕ್ಕೆ ನಂದಿಬೆಟ್ಟದ ಬಳಿ ಇರುವ ರೆಸಾರ್ಟ್ನಿಂದ ಹೊರಟ ಶಶಿಕಲಾ ಅವರಿಗೆ ತಮಿಳುನಾಡಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಬೆಂಬಲಿಗರು ಕುಂಬಳಕಾಯಿ ಒಡೆದು, ಕುಣಿದು ಕುಪ್ಪಳಿಸಿ ಸ್ವಾಗತ ಕೋರಿದ್ದಾರೆ.
ಎಐಡಿಎಂಕೆ ಕಚೇರಿಗೆ ಭೇಟಿ ನೀಡುತ್ತಾರಾ? ಶಶಿಕಲಾ
ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಗೆ ಭೇಟಿ ನೀಡುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯಲಲಿತಾ ಆಪ್ತೆ, ದಯವಿಟ್ಟು ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.