'ಚಿನ್ನಮ್ಮ' ಪತಿ ನಟರಾಜನ್ ಅಪೋಲೋ ಆಸ್ಪತ್ರೆಗೆ ದಾಖಲು
ಚೆನ್ನೈ, ಫೆಬ್ರವರಿ 6: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಪತಿ ಎಂ. ನಟರಾಜನ್ ಭಾನುವಾರ ರಾತ್ರಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಧ್ಯಮದ ವರದಿ ಪ್ರಕಾರ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಅಧಿಕ ರಕ್ತದೊತ್ತಡ ಕಾರಣಕ್ಕೆ ಭಾನುವಾರ ರಾತ್ರಿ 9ರ ಸುಮಾರಿಗೆ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು, ಅವರ ದೇಹ ಸ್ಥಿತಿಯಲ್ಲಿ ಚೇತರಿಕೆ ಕಂಡಿದೆ. ಆದರೂ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಶಶಿಕಲಾ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ ದಿನವೇ ನಟರಾಜನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.[ತರಾತುರಿಯಲ್ಲಿ ಸಿಎಂ ಹುದ್ದೆಗೆ ಶಶಿಕಲಾ: ಪ್ರಧಾನಿ ಮೋದಿ ಭಯ ಕಾಡಿತೇ?]
ಜಯಲಲಿತಾ ನಿಧನದ ನಂತರ ಒ.ಪನ್ನೀರ್ ಸೆಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಶಶಿಕಲಾ ಪತಿ ನಟರಾಜನ್ ಅವರು ಎಂಜಿಆರ್ ಬದುಕಿದ್ದಾಗಲೇ ಎಐಎಡಿಎಂಕೆಗೆ ಸೇರಿದ್ದರು. ಆದರೆ ಜಯಲಲಿತಾ ತಮ್ಮ ಪೋಯೆಸ್ ಗಾರ್ಡನ್ ನಿವಾಸ ಸೇರಿದಂತೆ ಎಲ್ಲ ಅಧಿಕಾರ ಕೇಂದ್ರದಿಂದ ನಟರಾಜನ್ ರನ್ನು ದೂರ ಇರಿಸಿದ್ದರು.
ಜಯಲಲಿತಾ ನಿಧನದ ನಂತರ ಸಾರ್ವಜನಿಕ ಹೇಳಿಕೆ ನೀಡಿದ್ದ ನಟರಾಜನ್, ಸಾಮಾನ್ಯ ವ್ಯಕ್ತಿ ಕೂಡ ರಾಜ್ಯದ ಮುಖ್ಯಮಂತ್ರಿ ಅಗಬಹುದು ಎನ್ನುವ ಮೂಲಕ ಹಲವು ಊಹಾಪೋಹಗಳಿಗೆ ಕಾರಣರಾಗಿದ್ದರು.