ಶಶಿಕಲಾ ನಟರಾಜನ್ ಒಡೆತನದ ಕೋಟ್ಯಂತರ ಆಸ್ತಿ ಸರ್ಕಾರದ ವಶಕ್ಕೆ
ಚೆನ್ನೈ, ಫೆಬ್ರವರಿ 12: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿ ಶಶಿಕಲಾ ನಟರಾಜನ್ ಅವರಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಮುಂದುವರೆಸಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರು ಜೈಲು ಸೇರಿದ್ದಾಗ ಸುಮಾರು 2000 ಕೋಟಿ ರು ಮೌಲ್ಯದ ಅಸ್ತಿ ಜಪ್ತಿ ಮಾಡಲಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲೇ ಎರಡು ಬಾರಿ ದಾಳಿ ನಡೆಸಲಾಗಿದೆ.
2017ರಲ್ಲಿ ಬೇನಾಮಿ ಆಸ್ತಿ ಗಳಿಕೆ, ಅಕ್ರಮ ಹೂಡಿಕೆ, ಶೆಲ್ ಕಂಪನಿಗಳ ಮೇಲೆ ದೂರು ದಾಖಲಾದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿತ್ತು. ಜಯಾಟಿವಿ ಕಚೇರಿ ಸೇರಿದಂತೆ 187 ಸ್ಥಳಗಳಲ್ಲಿ ಸುಮಾರು 700 ಆದಾಯ ತೆರಿಗೆ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿದ್ದರು.
ಕಾಂಚಿಪುರಂ, ತಿರುವರೂರ್ ಹಾಗೂ ಚೆಂಗಲ್ ಪೇಟ್ ಜಿಲ್ಲೆಗಳಲ್ಲಿರುವ ಶಶಿಕಲಾ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 300 ಕೋಟಿ ರು ಮೌಲ್ಯದ 144 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ತಂಜಾವೂರಿನಲ್ಲಿ 26,000 ಚದರ ಅಡಿ ಜಾಗ ಹಾಗೂ ತಿರುವರೂರ್ ನಲ್ಲಿ 1050 ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿ ಎಲ್ಲವೂ 1994ರಿಂದ 1996 ಅವಧಿಯಲ್ಲಿ ಅಕ್ರಮವಾಗಿ ಗಳಿಕೆ ಮಾಡಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಚೆನ್ನೈ ಪ್ರವೇಶಿಸಿರುವ ಶಶಿಕಲಾ ಅವರನ್ನು ಎಐಎಡಿಎಂಕೆ ಎಲ್ಲಾ ರೀತಿಯಿಂದಲೂ ಕಟ್ಟಿಹಾಕಲು ಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ಶಶಿಕಲಾ, ದಿನಕರನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಡಿಎಂಕೆ ನಮ್ಮ ಎದುರಾಳಿ ನಾವು ಒಟ್ಟಿಗೆ ಮಟ್ಟಹಾಕಬೇಕಿದೆ ಎಂದು ಶಶಿಕಲಾ ಕರೆ ನೀಡಿದ್ದಾರೆ.